ಕಡೂರು: ಪಟ್ಟಣದ ಹೃದಯ ಭಾಗದಲ್ಲಿರುವ ಶೌಚಾಲಯ ಹಲವು ವರ್ಷಗಳಿಂದ ನಿರುಪಯೋಗಿಯಾಗಿದ್ದು, ಪುರಸಭೆಯ ನಿರ್ಲಕ್ಷ್ಯವು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಪಟ್ಟಣದ ಪಿಎಲ್ಡಿ ಬ್ಯಾಂಕ್ ಸಭಾಂಗಣದ ಎದುರಿನ ಈ ಶೌಚಾಲಯವು ದುಃಸ್ಥಿತಿಗೆ ತಲುಪಿ, ಹತ್ತು ವರ್ಷಗಳಾಗಿವೆ. ದುರಸ್ತಿಯೂ ಮಾಡಿಲ್ಲ, ತೆರವೂ ಮಾಡಿಲ್ಲ. ಈ ಶೌಚಾಲಯದ ಎದುರು ಪಿಎಲ್ಡಿ ಬ್ಯಾಂಕ್ ಕಚೇರಿ, ಭಗೀರಥ ಉಪ್ಪಾರ ವಿದ್ಯಾರ್ಥಿ ನಿಲಯ ಹಾಗೂ ಹಲವು ಕಚೇರಿ – ಕಟ್ಟಡಗಳಿವೆ. ಈ ಜಾಗವನ್ನು ಸದುಪಯೋಗ ಪಡಿಸಬೇಕು ಎಂದು ಜನತೆ ಆಗ್ರಹಿಸಿದ್ದಾರೆ.
ತಾಲ್ಲೂಕಿನ ಶಕ್ತಿ ಸೌಧದ ತಾಲ್ಲೂಕು ಕಚೇರಿಯ ಹಿಂಭಾಗದಲ್ಲಿರುವ ತಹಶೀಲ್ದಾರ್ ಅಧಿಕೃತ ನಿವಾಸ ಬಳಿ ಪಾಳುಬಿದ್ದು ಶೌಚಾಲಯವು ಐದು ವರ್ಷಗಳಾದರೂ ದುರಸ್ತಿಯಾಗಿಲ್ಲ. ಈ ಹಿಂದಿನ ತಹಶೀಲ್ದಾರ್ ಚಿನ್ನರಾಜು, ಈ ನಿವಾಸದಲ್ಲಿಯೇ ವಾಸ್ತವ್ಯವಿದ್ದರು. ನಂತರದಲ್ಲಿ ಈ ನಿವಾಸ ಶಿಥಿಲವಾಯಿತು. ಅನಂತರದ ತಹಶೀಲ್ದಾರರು ಅನಿವಾರ್ಯವಾಗಿ ಬಾಡಿಗೆ ನಿವಾಸದಲ್ಲಿದ್ದಾರೆ.
ಈ ಕಟ್ಟಡದ ದುರಸ್ತಿಗಾಗಿ ಹಲವು ಬಾರಿ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೆ, ಯಾವ ಉಪಯೋಗವಾಗಿಲ್ಲ. ಈ ನಿವಾಸದ ಆವರಣದಲ್ಲಿ ಗಿಡಗಂಟಿಗಳು ಬೆಳೆದು ಹಾವುಗಳ ವಾಸಸ್ಥಾನವಾಗಿದೆ. ತಹಶೀಲ್ದಾರ್ ಕಚೇರಿಗೆ ಬರುವವರಿಗೆ ಈ ನಿವಾಸದ ಆವರಣವೇ ಶೌಚಾಲಯವಾಗಿದೆ. ರಾತ್ರಿ ವೇಳೆ ಮದ್ಯ ವ್ಯಸನಿಗಳ ಅಡ್ಡೆಯಾಗಿದೆ.
ಶೌಚಾಲಯದ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಲು ಪುರಸಭೆ ಮುಂದಾಗಬೇಕು. ಶೌಚಾಲಯದಂತೆ ಬಳಸಲ್ಪಡುತ್ತಿರುವ ತಹಶೀಲ್ದಾರ್ ನಿವಾಸದ ಆವರಣವನ್ನು ಸ್ವಚ್ಛಗೊಳಿಸಬೇಕು ಎನ್ನುತ್ತಾರೆ ಸ್ಥಳೀಯರಾದ ಗಣೇಶ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.