
ತರೀಕೆರೆ: ಕುಂಬಾರಿಕೆ ಇತ್ಯಾದಿ ಸಾಂಪ್ರದಾಯಿಕ ವೃತ್ತಿ ಕಲೆಗಳು ಬೆಳೆಯಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಂದಿರುವ ವಿಶ್ವಕರ್ಮ ಯೋಜನೆಯು ಜನರಿಗೆ ದೊಡ್ಡ ಶಕ್ತಿಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬೆಟ್ಟತಾವರಕೆರೆ ಮಡಿಕೆ ಮಾಡುವವರ ಕುಶಲ ಕೈಗಾರಿಕೆ ಸಹಕಾರ ಸಂಘವು ಗುರುಶಿಷ್ಟ ಹಸ್ತಶಿಲ್ಪ ಪ್ರಶಿಕ್ಷಣ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ 50 ದಿನಗಳ ತರಬೇತಿಯ ಸಮಾರೋಪ, 30 ಜನ ತರಬೇತಿ ಪಡೆದವರಿಗೆ ಮತ್ತು ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಅಭಿನಂದನಾ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕು ಬದಲಾದಂತೆ ವೃತ್ತಿಯನ್ನು ಆಧುನೀಕರಿಸಬೇಕು. ಕುಂಬಾರಿಕೆ ಇತ್ಯಾದಿ ಬೇರೆ ಬೇರೆ ಸಾಂಪ್ರದಾಯಕ ವೃತ್ತಿ ಕಲೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆಯಡಿ ₹12 ಸಾವಿರ ಕೋಟಿ ಅನುದಾನ ಮಂಜೂರು ಮಾಡಿದೆ. ಸಾಂಪ್ರದಾಯಕ ವೃತ್ತಿ ಕಲೆಗಳಲ್ಲಿ 6,552 ಮಂದಿಗೆ ತರಬೇತಿ ನೀಡಲಾಗಿದೆ. 2,043 ಮಂದಿಗೆ ಸಾಲ ಮಂಜೂರಾಗಿದೆ. ಅಂಚೆ ಇಲಾಖೆ ಮೂಲಕ 15 ಸಾವಿರ ಜನರಿಗೆ ಕಿಟ್ ವಿತರಿಸಲಾಗಿದೆ. ಸಿದ್ಧವಸ್ತುಗಳಿಗೆ ಮಾರುಕಟ್ಟೆ ಒದಗಿಸಲಾಗಿದೆ ಎಂದರು.
ಮಾಜಿ ಶಾಸಕ ಡಿ.ಎಸ್. ಸುರೇಶ್ ಮಾತನಾಡಿ, ಸ್ವದೇಶಿ ವಸ್ತುಗಳನ್ನು ಬಳಸಬೇಕು, ವಿದೇಶಿ ವಸ್ತುಗಳನ್ನು ತ್ಯಜಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ ಎಂದರು.
ದಿಶಾ ಸಮಿತಿ ನಾಮ ನಿರ್ದೇಶಿತ ಸದಸ್ಯೆ ರಾಜೇಶ್ವರಿ ರಾಜಶೇಖರ್ ಮಾತನಾಡಿ, ಯಾಂತ್ರಿಕ ಯುಗದಲ್ಲಿಯೂ ಮಣ್ಣಿನ ಕಲೆ ಜೀವಂತವಾಗಿರಬೇಕು ಎಂಬುದು ನಮ್ಮೆಲ್ಲರ ಆಶಯ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಆರ್. ದೃವಕುಮಾರ್ ಮಾತನಾಡಿದರು. ಬೆಟ್ಟತಾವರೆಕೆರೆ ಕುಂಬಾರ ಸಂಘ ಅಧ್ಯಕ್ಷ ಬಿ.ವಿ. ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಸದಸ್ಯರಾದ ಕಲ್ಲೇಶಪ್ಪ, ಸುಮಿತ್ರಾ, ಮುಖಂಡರಾದ ರಾಜಶೇಖರ್, ಪಾಟ್ರಿ ಆರ್ಟ್ ಟೈನ್ ಮಾಸ್ಸರ್ ಎನ್.ಬಿ. ಭಾಗ್ಯವತಿ, ಮೈಸೂರು ಕರಕುಶಲ ಅಭಿವೃದ್ಧಿ ಅಧಿಕಾರಿ ಶಬೀರಾ, ಸಹಾಯಕ ನಿರ್ದೇಶಕ ವಿನೋದ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.