ADVERTISEMENT

ವಾಟೆಖಾನ್‌ ಎಸ್ಟೇಟ್‌ ಬ್ಯಾಂಕ್‌ ಸುಪರ್ದಿಗೆ

ಕಾಫಿ ಎಸ್ಟೇಟ್‌ ಮಾಲೀಕರಿಂದ ₹ 21 ಕೋಟಿ ಸಾಲ ಬಾಕಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 2:45 IST
Last Updated 12 ಫೆಬ್ರುವರಿ 2021, 2:45 IST

ಚಿಕ್ಕಮಗಳೂರು: ಸಾಲ ಬಾಕಿ ಬಾಬ್ತಿಗೆ ತಾಲ್ಲೂಕಿನ ಹಿರೇಕೊಳಲೆ ಗ್ರಾಮದ ವಾಟೆಖಾನ್‌ ಕಾಫಿ ಎಸ್ಟೇಟ್‌ ಅನ್ನು (214 ಎಕರೆ) ಯೂನಿಯನ್‌ ಬ್ಯಾಂಕ್‌ ಅಧಿಕಾರಿಗಳು ಗುರುವಾರ ಸುಪರ್ದಿಗೆ ಪಡೆದರು.

ಎಸ್ಟೇಟ್‌ ಮಾಲೀಕರಾದ ಯು.ಎಂ.ರಮೇಶ್‌ ರಾವ್‌ ಮತ್ತು ಎಸ್‌.ದಿನಕರ ರಾವ್‌ ಅವರು ಕಾಫಿ ತೋಟವನ್ನು ಅಡಮಾನ ಇರಿಸಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದಾರೆ. ಸಾಲ ಮರುಪಾವತಿ ಮಾಡಿರಲಿಲ್ಲ. ಬ್ಯಾಂಕ್‌ನವರು ‘ಸೆಕ್ಯುರಿಟೈಸೇಷನ್‌ ಅಂಡ್‌ ರಿಕನ್‌ಸ್ಟ್ರಕ್ಷನ್‌ ಆಫ್‌ ಫೈನಾನ್ಶಿಯಲ್‌ ಅಸೆಟ್ಸ್‌ ಅಂಡ್‌ ಎನ್ಫೋರ್ಸ್‌ಮೆಂಟ್‌ ಆಫ್‌ ಸೆಕ್ಯುರಿಟಿ ಇಂಟರೆಸ್ಟ್‌ ಆಕ್ಟ್‌–2002’ ಕಾಯ್ದೆ ಅನ್ವಯ 2019ರ ಮೇ ನಲ್ಲಿ ಮಾಲೀಕರಿಗೆ ನೋಟಿಸ್‌ ನೀಡಿದ್ದರು.

ಮಾಲೀಕರು ಸಾಲದ ಬಾಕಿ ₹ 21 ಕೋಟಿ ಮೊತ್ತವನ್ನು ಪಾವತಿಸಿರಲಿಲ್ಲ. ಪ್ರಕರಣ ಕೋರ್ಟ್‌ ಮೆಟ್ಟಿಲು ಏರಿತ್ತು. ಚಿಕ್ಕಮಗಳೂರಿನ ಪ್ರಧಾನ ಸಿವಿಲ್‌ ಕೋರ್ಟ್‌ ಆಸ್ತಿಯನ್ನು ಸುಪರ್ದಿಗೆ ಪಡೆಯಲು ಫೆ. 8ರಂದು ಆದೇಶ ನೀಡಿತ್ತು.

ADVERTISEMENT

ಬ್ಯಾಂಕ್ ಅಧಿಕಾರಿಗಳು ಪೊಲೀಸರ ನೆರವಿನಲ್ಲಿ ಆಸ್ತಿಯನ್ನು ಸುಪರ್ದಿಗೆ ತೆಗೆದುಕೊಂಡರು.

‘ಮಾಲೀಕ ರಮೇಶ್‌ ರಾವ್‌ ಅವರು ಬ್ಯಾಂಕ್‌ನ ಸಾಲ ವಸೂಲಾತಿ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲು ಏರಿದ್ದರು. ಹೈಕೋರ್ಟ್‌ನಲ್ಲಿ ಬ್ಯಾಂಕ್‌ನಂತೆ ಆಗಿದೆ’ ಎಂದು ಯೂನಿಯನ್‌ ಬ್ಯಾಂಕ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಎಸ್ಟೇಟ್‌ ಅನ್ನು ಸುಪರ್ದಿಗೆ ಪಡೆಯದಂತೆ ಕಾರ್ಮಿಕರು ಆಧಿಕಾರಿಗಳಿಗೆ ಮನವಿ ಮಾಡಿದರು.

ಬ್ಯಾಂಕ್‌ನ ಪ್ರಾದೇಶಿಕ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ರಮಣ ರಾವ್‌, ವಕೀಲ ಪೃಥ್ವಿ, ಯೂನಿಯನ್‌ ಬ್ಯಾಂಕ್‌ ಎಂ.ಜಿ .ರಸ್ತೆ ಶಾಖಾ ವ್ಯವಸ್ಥಾಪಕ ಮುರಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.