ಚಿಕ್ಕಮಗಳೂರು: ನಗರದ ಕೆ.ಎಂ ರಸ್ತೆಯಲ್ಲಿ (ನಾಯ್ಡು ಕಲ್ಯಾಣಮಂಟಪ ಮುಂಭಾಗ) ದ್ವಿಚಕ್ರವಾಹನ ವೀಲಿಂಗ್ ಮಾಡಿಕೊಂಡು ಚಲಾಯಿಸುತ್ತಿದ್ದಕ್ಕೆ ಸಂಬಂಧಿಸಿದಂತೆ ಆರು ಮಂದಿ ವಿರುದ್ಧ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಎಐಟಿ ವೃತ್ತದ ಕಡೆಯಿಂದ ಹೌಸಿಂಗ್ ಬೋರ್ಡ್ ಕಡೆಗಿನ ಮಾರ್ಗದಲ್ಲಿ ಕೆಲ ಯುವಕರು ಬೈಕ್ ವೀಲಿಂಗ್ ಮಾಡುವುದನ್ನು ಗಮನಿಸಿ ಸಾರ್ವಜನಿಕರು ಸಂಚಾರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ.
‘ಆರು ದ್ವಿಚಕ್ರ ವಾಹನಗಳಲ್ಲಿ ವೀಲಿಂಗ್ ಮಾಡಿದ್ದಾರೆ. ಹೆಲ್ಮೆಟ್ ಧರಿಸದೆ, ನಿರ್ಲಕ್ಷ್ಯ ಮತ್ತು ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡಿದ್ದಾಗಿ ಸಾರ್ವಜನಿಕರು ತಿಳಿಸಿದ್ದಾರೆ. ವಾಹನಗಳ ನೋಂದಣಿ ಸಂಖ್ಯೆ ಪತ್ತೆ ಮಾಡಿದ್ದೇವೆ. ಮಾಲೀಕರನ್ನು ಪತ್ತೆ ಹಚ್ಚಿ, ವೀಲಿಂಗ್ ಮಾಡಿದವರನ್ನು ಹಿಡಿಯುತ್ತೇವೆ’ ಎಂದು ಸಂಚಾರ ಠಾಣೆ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.
ಬುಲ್ಡೋಜರ್ ಹರಿಸಿ ಕರ್ಕಶ ಶಬ್ಧದ ಸೈಲೆನ್ಸರ್ ನಾಶ
ನಗರದ ಸಂಚಾರ ಠಾಣೆ ಮುಂದಿನ ರಸ್ತೆಯಲ್ಲಿ ಕರ್ಕಶ ಶಬ್ಧದ ಸೈಲೆನ್ಸರ್ಗಳನ್ನು ರಸ್ತೆಯಲ್ಲಿ ಇಟ್ಟು ಬುಲ್ಡೋಜರ್ ಹರಿಸಿ ನಾಶಪಡಿಸಲಾಗಿದೆ.
ಸುಮಾರು 15 ಸೈಲೆನ್ಸರ್ಗಳನ್ನು ನಾಶ ಪಡಿಸಲಾಗಿದೆ. ಕರ್ಕಶ ಶಬ್ಧ ಹೊಮ್ಮುವಂತೆ ಸೈಲೆನ್ಸರ್ ಮಾರ್ಪಾಡು ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಸಂದೇಶ ನೀಡಿದ್ದಾರೆ.
‘ಸೈಲೆನ್ಸರ್ ಕರ್ಕಶ ಶಬ್ಧ ಇದ್ದ ಕೆಲ ಗಾಡಿಗಳನ್ನು ಈಚೆಗೆ ವಶಪಡಿಸಿಕೊಳ್ಳಲಾಗಿತ್ತು. ಸೈಲೆನ್ಸರ್ ತೆಗೆದು ಬುಲ್ಡೋಜರ್ ಹರಿ ನಾಶ ಮಾಡಲಾಯಿತು’ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.