ಕಡೂರು: ರೈತರಲ್ಲಿ ಆತ್ಮಸ್ಥೈರ್ಯ ಮೂಡಿಸುವುದು ಪ್ರಸ್ತುತದ ಅಗತ್ಯತೆ ಮತ್ತು ಅನಿವಾರ್ಯ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಪ್ರತಿಪಾ ದಿಸಿದರು.
ತಾಲ್ಲೂಕಿನ ಗೌಡನಕಟ್ಟೆಹಳ್ಳಿಯ ಸಮುದಾಯ ಭವನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸದ್ಯ ಕೊರೊನಾ ವೈರಸ್ ವಿಶ್ವವನ್ನು ಕಂಗೆಡಿಸಿದೆ. ಅದರ ನಿಯಂತ್ರಣಕ್ಕೆ ಸರ್ಕಾರ ಸ್ತುತ್ಯ ಕ್ರಮ ಕೈಗೊಂಡಿದೆ. ಲಾಕ್ ಡೌನ್ ಪರಿಣಾಮದಿಂದ ಬಹಳಷ್ಟು ಅನಪೇಕ್ಷಿತ ಬೆಳವಣಿಗೆಗಳಾಗಿವೆ. ರೈತರ ಪರಿಸ್ಥಿತಿ ತೀವ್ರ ತೊಂದರೆಗೊಳಗಾಗಿದೆ. ಬೆಳೆದ ಬೆಳೆ ಮಾರಲಾಗದೆ ಹಾಕಿದ ದುಡ್ಡನ್ನೂ ವಾಪಸ್ ಪಡೆಯಲಾ ಗದಂತಹ ಹತಾಶ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಕೂಡಲೇ ಈ ರೈತರ ನೆರವಿಗೆ ಧಾವಿಸಬೇಕು’ ಎಂದು ಒತ್ತಾಯಿಸಿದರು.
ರೈತರು ಬೆಳೆದ ಹಾಗೂ ಹಾಪ್ಕಾಮ್ಸ್ ಖರೀದಿಸಬಹುದಾದಂತಹ ಬೆಳೆಯನ್ನು ಖರೀದಿಸಲು ಸಾಧ್ಯವೇ ಎಂದು ಹಾಪ್ ಕಾಮ್ಸ್ ನಿರ್ದೇಶಕ ವೆಂಕಟೇಶ್ ಅವರನ್ನು ಕೋರಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿ ರೈತರು ನೇರವಾಗಿ ಸಂಪರ್ಕಿಸಿದರೆ ಅವರ ಹೊಲಕ್ಕೇ ಹೋಗಿ ಖರೀದಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಹಣ್ಣು,ತರಕಾರಿ ಬೆಳೆದ ರೈತರು ಹಾಪ್ಕಾಮ್ಸ್ ನಿರ್ದೇಶಕರನ್ನು (ಮೊ: 8495029318) ಸಂಪರ್ಕಿಸಿ, ಪ್ರಯೋಜನೆ ಪಡೆಯುವಂತೆ ಮನವಿ ಮಾಡಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ನಿರ್ದೇಶಕ ಬಿದರೆ ಜಗದೀಶ್, ಶೂದ್ರಶ್ರೀನಿವಾಸ್, ಚಂದನ ಇದ್ದರು.
ರಾಜಕೀಯ ಉದ್ದೇಶವಿಲ್ಲ: ದತ್ತ
ಕಡೂರು ತಾಲ್ಲೂಕಿನ ವಿ.ಸಿದ್ದರಹಳ್ಳಿಗೆ ಭೇಟಿ ನೀಡಿದ ವೈ.ಎಸ್.ವಿ. ದತ್ತ ಕಲ್ಲಂಗಡಿ ಬೆಳೆಯನ್ನು ವೀಕ್ಷಿಸಿ, ಸುಮಾರು ಹದಿನೈದು ಟನ್ ಖರೀದಿಸಿದರು.
ನಂತರ ಗೌಡನಕಟ್ಟೆಹಳ್ಳಿಗೆ ತೆರಳಿ ಅಲ್ಲಿ ರೈತ ಪ್ರಭು ಬೆಳೆದ ಟೊಮೆಟೊ ಹೊಲದಲ್ಲಿ ಕೊಯ್ಲು ಮಾಡಲಾಗಿದ್ದ ಸುಮಾರು 200 ಬಾಕ್ಸ್ (ಮೂರು ಟನ್) ಟೊಮೆಟೊ ಖರೀದಿಸಿದರು. ಒಟ್ಟು ಹದಿನೈದು ಟನ್ ಖರೀದಿಸುವುದಾಗಿ ದತ್ತ ಭರವಸೆ ನೀಡಿದರು.
‘ರೈತರ ಬೆಳೆಯನ್ನು ಸಾಂಕೇತಿಕವಾಗಿ ಖರೀದಿಸಿ ಅದನ್ನು ಬಡವರಿಗೆ ಉಚಿತವಾಗಿ ಹಂಚಲಿದ್ದೇವೆ. ರೈತರ ಜೊತೆ ನಾವಿದ್ದೇವೆಂಬ ಸಂಕೇತವಿದಷ್ಟೇ ವಿನಾ ಇದರಲ್ಲಿ ಬೇರಾವ ರಾಜಕೀಯ ಉದ್ದೇಶವಿಲ್ಲ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.