ಕೊಟ್ಟಿಗೆಹಾರ: ಬಾಳೂರು, ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆ ಕುಸಿತ ಪ್ರದೇಶಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಪ್ರಭು ಭೇಟಿ ನೀಡಿ, ಸಂತ್ರಸ್ತರ ಜತೆ ಮಾತುಕತೆ ನಡೆಸಿದರು.
ಬಳಿಕ ಮಾತನಾಡಿದ ಅವರು, ‘ನಿಡುವಾಳೆ, ಮರ್ಕಲ್, ಬಾಳೂರು ಪ್ರದೇಶದಲ್ಲಿ ಮನೆ ಹಾನಿ ಅನುಭವಿಸಿದ ಸಂತ್ರಸ್ತರಿಗೆ ಪರ್ಯಾಯ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಾಳೂರು, ನಿಡುವಾಳೆ ಭಾಗದಲ್ಲಿ ನಿರ್ವಸಿತರಾದವರಿಗೆ ಹದಿನೈದು ದಿನಗಳಲ್ಲಿ ಜಾಗ ಅನುಮೋದಿಸಿ, ಸಂತ್ರಸ್ತರಿಗೆ ವಿತರಿಸಲಾಗುವುದು’ ಎಂದು ಭರವಸೆ ನೀಡಿದರು.
ಮನೆ ಹಾನಿಗೀಡಾದವರಿಗೆ ಬಹುತೇಕ ಪರಿಹಾರ ವಿತರಿಸಲಾಗಿದೆ. ಪರಿಹಾರ ಸಿಗದ ಸಂತ್ರಸ್ತರು, ಆಗಿರುವ ಹಾನಿಯನ್ನು ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
‘ಗ್ರಾಮೀಣ ಭಾಗದಲ್ಲಿ ಆಸ್ಪತ್ರೆಗಳಿಗೆ ವೈದ್ಯರು ಹಾಗೂ ಸಿಬ್ಬಂದಿ ನಿಯೋಜಿಸುವ ಕುರಿತು ಸಭೆ ನಡೆಸಲಾಗುವುದು’ ಎಂದ ಅವರು, ನಿಡುವಾಳೆಯ ಅಂಗನವಾಡಿ ಕೇಂದ್ರದ ನಿರ್ವಹಣೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರ್ಷಕುಮಾರ್, ಸಹಾಯಕ ನಿರ್ದೇಶಕ ಡಿ.ಡಿ. ಪ್ರಕಾಶ್, ನಿಡುವಾಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರುತಿ, ಉಪಾಧ್ಯಕ್ಷ ನವೀನ್ ಹಾವಳಿ, ಪರೀಕ್ಷಿತ್ ಜಾವಳಿ, ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ಬಿ.ಬಿ. ಮಂಜುನಾಥ್, ಸಚಿನ್ ಮರ್ಕಲ್, ಮನೋಜ್ ಬಾಳೂರು, ಪ್ರಕಾಶ್, ಶಶಿಕುಮಾರ್, ಪಿಡಿಒಗಳಾದ ಕೆ.ಪದ್ಮರಾಜ್, ವಿಶ್ವನಾಥ್, ಮಹೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.