ಹಿರಿಯೂರು: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 61ನೇ ಪರಿನಿರ್ವಾಣದ ದಿನದಂದು
ಸಂವಿಧಾನ ಶಿಲ್ಪಿಯ ಆಶಯಗಳನ್ನು ನಶಿಸಿಹೋಗಲು ಬಿಡುವುದಿಲ್ಲ ಎಂಬ ಪ್ರತಿಜ್ಞೆ ತೊಡಬೇಕಿದೆ ಎಂದು ಅಂಬೇಡ್ಕರ್ ಪಿಯು ಕಾಲೇಜಿನ ಪ್ರಾಂಶುಪಾಲ ಬಿ.ಪಿ. ತಿಪ್ಪೇಸ್ವಾಮಿ ಹೇಳಿದರು.
ನಗರದ ಅಂಬೇಡ್ಕರ್ ಪಿಯು ಕಾಲೇಜು ಹಾಗೂ ಗೌತಮ್ ಅಕಾಡೆಮಿ ವಿದ್ಯಾಸಂಸ್ಥೆ ನೇತೃತ್ವದಲ್ಲಿ ಬುಧವಾರ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನ ರಚನೆಯ ಮೂಲಕ ಅಂಬೇಡ್ಕರ್ ಕೇವಲ ದಲಿತರಿಗೆ ಸಂವಿಧಾನದತ್ತ ಮೀಸಲಾತಿ ಕಲ್ಪಿಸಲಿಲ್ಲ. ಬದಲಿಗೆ ದೇಶದಲ್ಲಿ ಮೂಲಸೌಲಭ್ಯಗಳಿಲ್ಲದೆ ಬದುಕುತ್ತಿದ್ದ ಬಡಜನರಿಗೂ ಮೀಸಲಾತಿ ಕಲ್ಪಿಸುವ ಮೂಲಕ ಗೌರವದ ಬದುಕು ನಡೆಸಲು ಅವಕಾಶ ಮಾಡಿಕೊಟ್ಟರು. ಅವರ ಮಾನವೀಯ ಆಶಯಗಳಿಗೆ ವಿರುದ್ಧವಾಗಿ ಪದೇ ಪದೇ ಸಂವಿಧಾನಕ್ಕೆ ತಿದ್ದುಪಡಿ
ತರಬಾರದು ಎಂದು ಅವರು ಆಗ್ರಹಿಸಿದರು.
ಭಾವಚಿತ್ರದ ಮೆರವಣಿಗೆ ನಗರದ ವೇದಾವತಿ ಬಡಾವಣೆಯಿಂದ ಆರಂಭವಾಗಿ ಪ್ರವಾಸಿ ಮಂದಿರ ವೃತ್ತ, ತಾಲ್ಲೂಕು ಕಚೇರಿ, ಗಾಂಧಿವೃತ್ತದ ಮೂಲಕ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಇರುವ ಅಂಬೇಡ್ಕರ್ ಪುತ್ಥಳಿವರೆಗೆ ಸಾಗಿತು. ದಲಿತ
ಸಂಘರ್ಷ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರೊಂದಿಗೆ ಮೆರವಣಿಗೆ ಅಂತ್ಯಗೊಂಡಿತು.
ಮೆರವಣಿಗೆಯಲ್ಲಿ ಅಂಬೇಡ್ಕರ್ ಪಿಯು ಕಾಲೇಜು, ಗೌತಮ್ ಶಾಲೆ, ಬಾಪೂಜಿ ನರ್ಸಿಂಗ್ ಕಾಲೇಜು, ಮಾರುತಿ ಪ್ರೌಢಶಾಲೆ ಹಾಗೂ ರಮಾಬಾಯಿ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಅಹಿಂದ ಮುಖಂಡ ಎಂ.ಡಿ. ರವಿ ಜಾಥಾ ಉದ್ಘಾಟಿಸಿದರು. ಮಂಜುನಾಥ ಶೆಟ್ಟಿ, ಧನಂಜಯ್, ಮಂಜುನಾಥ್, ಚೇತನ್, ಸದಾಶಿವಯ್ಯ, ಹುನೇಂದ್ರನಾಯ್ಕ, ಪರಮೇಶ್ವರಪ್ಪ, ವೆಂಕಟೇಶ್, ಜಗನ್ನಾಥ್, ಕೆ.ಆರ್.ರಂಗಪ್ಪ, ಇ. ನಾಗೇಂದ್ರಪ್ಪ, ಎಚ್.ಆರ್. ಲೋಕೇಶ್, ಶಾಂತಕುಮಾರ್, ಪ್ರಕಾಶ್, ಮಂಜು, ರಜಾಕ್ ಸಾಬ್, ಪ್ರೇಮಾನಂದ ಗೌತಮ್, ಗೋವಿಂದರಾಜು, ಮಮತಾ, ವೈಶಾಲಿ, ತ್ರಿವೇಣಿ, ರಾಧಾ, ಮಂಜುಳ, ಸುನೀತಕುಮಾರಿ, ಸುಜಾತ, ರಾಜೇಶ್ವರಿ, ಪ್ರಿಯಾಂಕ, ಅಂಬುಜಾ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.