ADVERTISEMENT

ಅಡುಗೆ ಅನಿಲ ಪೂರೈಕೆ ವಿಳಂಬ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 6:35 IST
Last Updated 8 ಫೆಬ್ರುವರಿ 2012, 6:35 IST

ಚಳ್ಳಕೆರೆ: ಪಟ್ಟಣದಲ್ಲಿರುವ ಕೈಲಾಸ್ ಗ್ಯಾಸ್ ವಿತರಕರು ನಾಗರಿಕರಿಗೆ ಅಡುಗೆ ಅನಿಲ ವಿತರಣೆಯಲ್ಲಿ ಮಾಡುತ್ತಿರುವ ವಿಳಂಬ ನೀತಿಯ ವಿರುದ್ಧ ಮಂಗಳವಾರ ಅನಿಲ ಪೂರೈಕೆ ಮಳಿಗೆ ಮುಂದೆ ನೂರಾರು ಜನರು ಸೇರಿ ಮತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಹದಿನೈದು ದಿನಗಳಿಗೂ ಮುನ್ನ ಮುಂಗಡವಾಗಿ ಅಡುಗೆ ಅನಿಲವನ್ನು ಕಾಯ್ದಿರಿಸಿ ಸಮಯ ನಿಗದಿಯಾಗಿದ್ದರೂ, ಅನಿಲ ಪೂರೈಕೆ ಮಾಡುತ್ತಿಲ್ಲ. ಸಾಕಷ್ಟು ಬಾರಿ ಬಂದು ವಾಪಸ್ ಹೋಗಿದ್ದೇವೆ. ಆದರೂ, ಮಾಲೀಕರು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಸಿದರು.

ಸರ್ಕಾರ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ  ಸಾರ್ವಜನಿಕರಿಗೆ ಅನುಕೂಲ ಆಗಲಿ ಎಂದು ವಿತರಕರನ್ನು ನೇಮಿಸಿದೆ. ಆದರೆ, ಇಲ್ಲಿನ ಮಾಲೀಕರು ಮಾತ್ರ ಉಚಿತವಾಗಿ ಅನಿಲ ನೀಡುತ್ತೇನೆ ಎಂಬವವರ ರೀತಿಯಲ್ಲಿ ಮಾತನಾಡುತ್ತಾರೆ. ಸಾರ್ವಜನಿಕರ ಜತೆಗೆ ಸೌಹಾರ್ದತೆಯಿಂದ ನಡೆದುಕೊಳ್ಳದ ಇವರ ವಿತರಣೆಯ ಅನುಮತಿಯನ್ನು ಕೂಡಲೆ ರದ್ದುಪಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಲೀಕರು ಸಾರ್ವಜನಿಕರೊಂದಿಗೆ ಏಕವಚನದಲ್ಲಿ ಮಾತನಾಡುವುದು ಮುಂದುವರಿಯುತ್ತಿದೆ ಎಂದರು.
ಈ ಬಗ್ಗೆ ಅನೇಕ ಸಂಘಟನೆಗಳು, ಸಾರ್ವಜನಿಕರು ತಹಶೀಲ್ದಾರ್‌ಗೆ ಮನವಿ ಮಾಡಿದರೂ ಇವರ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿಲ್ಲ ಎಂದು ಸಾರ್ವನಿಕರು ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.