ಮೊಳಕಾಲ್ಮುರು: ವಿಧಾನಸಭಾ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಲು ಚಿತ್ರದುರ್ಗಕ್ಕೆ ಜ.11ರಂದು ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ನಿಯೋಗ ತೆರಳಲು ಶುಕ್ರವಾರ ಇಲ್ಲಿ ನಡೆದ ನೀರಾವರಿ ಹೋರಾಟ ಸಭೆಯಲ್ಲಿ ತೀರ್ಮಾನಿಸಲಾಯಿತು.
ಹಾನಗಲ್ ಪ್ರವಾಸಿಮಂದಿರ ಆವರಣದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಮಾಡಲಾಯಿತು. ಪಕ್ಷಾತೀತವಾಗಿ ನಿಯೋಗ ತೆರಳಿಲಿದ್ದು, ಬೆಳಿಗ್ಗೆ 9ಕ್ಕೆ ಮುರುಘಾಮಠ ಆವರಣದಲ್ಲಿ ಕ್ಷೇತ್ರದ ನಾಲ್ಕೂ ಹೋಬಳಿಗಳ ಹೋರಾಟ ಸಮಿತಿ ಪದಾಧಿಕಾರಿಗಳು, ಮುಖಂಡರು ಆಗಮಿಸಬೇಕು. ನಂತರ ಕಾರ್ಯಕ್ರಮ ನಿಮಿತ್ತ ಮಠಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಸಮಿತಿ ಹೇಳಿದೆ.
ಜ.22ರಿಂದ ವಿಧಾನಸಭೆ ಅಧಿವೇಶನ ಹಿನ್ನೆಲೆಯಲ್ಲಿ ಜ.18ರ ಒಳಗಾಗಿ ಕ್ಷೇತ್ರ ವ್ಯಾಪ್ತಿಯ ನಾಲ್ಕು ಹೋಬಳಿಗಳಲ್ಲಿ ನೀರಾವರಿಗೆ ಆಗ್ರಹಿಸಿ ರಸ್ತೆತಡೆ, ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಹೋಬಳಿ ಘಟಕಗಳ ಅಧ್ಯಕ್ಷರಾದ ಮಾರನಾಯಕ, ಎಂ.ವೈ.ಟಿ. ಸ್ವಾಮಿ, ಆರ್.ಎಂ.ಅಶೋಕ್, ಹನುಮಂತರೆಡ್ಡಿ, ಮುಖಂಡರಾದ ಜಿಂಕಾ ಶ್ರೀನಿವಾಸ್, ಟಿ.ಡಿ.ದೊಡ್ಡಯ್ಯ, ಶಂಕರರೆಡ್ಡಿ, ಬಿ.ಪಿ. ಬಸವರೆಡ್ಡಿ, ಡಿ.ಸಿ.ನಾಗರಾಜ್, ಮಹೇಶ್, ಡಿ.ಎಂ.ಈಶ್ವರಪ್ಪ, ಗುರುರಾಜ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶ್ರೀಕಾಂತರೆಡ್ಡಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.