ADVERTISEMENT

ಉದ್ಯೋಗದೊಂದಿಗೆ ಅಧ್ಯಯನವೂ ನಡೆಯಲಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 6:10 IST
Last Updated 8 ಫೆಬ್ರುವರಿ 2011, 6:10 IST

ಹಿರಿಯೂರು: ಸ್ವ ಉದ್ಯೋಗ ಕೈಗೊಳ್ಳುವ ಮಹಿಳೆಯರು ಉತ್ಪಾದಿಸುವ ವಸ್ತುಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಂಗೇಗೌಡ ಕರೆ ನೀಡಿದರು.

ನಗರದ ತೋಟಗಾರಿಕೆ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ, ತೋಟಗಾರಿಕೆ ಇಲಾಖೆ ವತಿಯಿಂದ ರೈತ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಎರಡು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯೋಗದಲ್ಲಿ ತೊಡಗಿಸಿ ಕೊಳ್ಳುವವರಿಗೆ ತರಬೇತಿಯ ಜತೆ ಅಧ್ಯಯನ ಅಗತ್ಯವಾಗಿ ಬೇಕು. ತರಬೇತಿಯನ್ನು ತೋಟಗಾರಿಕೆ ಇಲಾಖೆ ನೀಡುತ್ತದೆ. ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ಸಾಮಗ್ರಿಗಳನ್ನು ಬಳಸಿಕೊಂಡು, ಗೃಹೋಪಯೋಗಿ, ಸೌಂದರ್ಯವರ್ಧಕ ವಸ್ತುಗಳನ್ನು ಉತ್ಪಾದಿಸಬಹುದಾಗಿದೆ.

ಉತ್ಪಾದಿಸಿದ ವಸ್ತುಗಳನ್ನು ಪ್ಯಾಕಿಂಗ್ ಮಾಡುವುದು ಬಹಳ ಮುಖ್ಯ. ಪ್ಯಾಕಿಂಗ್ ಆಕರ್ಷಕವಾಗಿ, ಕಲಾತ್ಮಕವಾಗಿ ಇದ್ದರೆ ಮಾರುಕಟ್ಟೆ ಮಾಡುವುದು ಸುಲಭವಾಗುತ್ತದೆ. ಕಲಬೆರಕೆ ಇಲ್ಲದೆ, ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಇದ್ದರೆ ನಿಧಾನವಾಗಿ ಲಾಭ ಗಳಿಸಬಹುದು ಎಂದು ಅವರು ತಿಳಿಸಿದರು.

ತುಳಸಿ ಪತ್ರೆಗೆ ಈಗ ಬಹಳಷ್ಟು ಬೇಡಿಕೆ ಇದೆ. ಅದರಲ್ಲಿ ಹೆಚ್ಚು ಔಷಧಿಯ ಗುಣವಿರುವ ಕಾರಣ ಅದರ ಬಳಕೆ ಹೆಚ್ಚಿದೆ. ಜಿಲ್ಲಾ ಪಂಚಾಯ್ತಿ ವತಿಯಿಂದ ತುಳಸಿ ಬೆಳೆಯಲು ಮಹಿಳೆಯರಿಗೆ ನೆರವು ನೀಡಲಾಗುತ್ತದೆ. ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಇದ್ದರೆ ಇಂತಹ ಚಟುವಟಿಕೆಗಳ ಮೂಲಕ ಖಂಡಿತವಾಗಿ ಆರ್ಥಿಕವಾಗಿ  ಸಬಲರಾಗಬಹುದು ಎಂದು ರಂಗೇಗೌಡ ಅಭಿಪ್ರಾಯಪಟ್ಟರು.

ಮಹಿಳೆಯರು ಇರುವ ಗುಂಪಿನಲ್ಲಿ ಅರ್ಧದಷ್ಟು ಪರಿಶಿಷ್ಟ ಜಾತಿ-ವರ್ಗದ ಸದಸ್ಯರಿದ್ದರೆ ತಾ.ಪಂ. ವತಿಯಿಂದ ್ಙ 1.25 ಲಕ್ಷ ಸಹಾಯಧನ ನೀಡಲಾಗುತ್ತದೆ. ಬ್ಯಾಂಕುಗಳು ಕೂಡಾ ಸಾಲ ನೀಡಲು ನಿರಾಕರಿಸುವಂತಿಲ್ಲ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ.ವೆಂಕಟೇಶ್ ತಿಳಿಸಿದರು.

ತಾ.ಪಂ. ಉಪಾಧ್ಯಕ್ಷೆ ಡಾ. ಸುಜಾತಾ, ಜಿ.ಪಂ. ಸದಸ್ಯ ದ್ಯಾಮಣ್ಣ, ಸಹಾಯಕ ತೋಟಗಾರಿಕೆ ನಿರ್ದೇಶಕಿ ಡಾ.ಸವಿತಾ, ಡಾ.ಚೈತ್ರಾ, ಯಶವಂತ್, ಚೌಧರಿ, ಕಲ್ಲಪ್ಪ, ದೇವೇಂದ್ರಪ್ಪ ಹಾಜರಿದ್ದರು. ನಿವೃತ್ತ ಕೃಷಿ ಅಧಿಕಾರಿ ಶರಣಪ್ಪ ತರಬೇತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.