ADVERTISEMENT

ಎಚ್.ಡಿ. ಪುರ: ದೇವಸ್ಥಾನದಲ್ಲಿ ಕಳವು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 8:35 IST
Last Updated 15 ಫೆಬ್ರುವರಿ 2011, 8:35 IST

ಚಿತ್ರದುರ್ಗ: ಬಾಗಿಲಿನ ಬೀಗ ಒಡೆದು ಚಿನ್ನಾಭರಣ ಮತ್ತು ನಗದು ಕಳವು ಮಾಡಿರುವ ಘಟನೆ ಹೊಳಲ್ಕೆರೆ ತಾಲ್ಲೂಕಿನ ಎಚ್‌ಡಿ. ಪುರ ಗ್ರಾಮದ ಬನಶಂಕರಿ ದೇವಸ್ಥಾನದಲ್ಲಿ ನಡೆದಿದೆ.
ದೇವಸ್ಥಾನದ ಅರ್ಚಕರಾದ ಪೂರ್ವಾಚಾರ್ (45) ಅವರು ಭಾನುವಾರ ರಾತ್ರಿ ಪೂಜೆ ಮುಗಿಸಿಕೊಂಡು ಗರ್ಭಗುಡಿಯ ಬೀಗ ಹಾಕಿಕೊಂಡು ಹೋಗಿದ್ದರು. ಸೋಮವಾರ ಬೆಳಿಗ್ಗೆ ದೇವಸ್ಥಾನದ ಬಳಿ ಬಂದು ನೋಡಿದಾಗ ಬಾಗಿಲುಗಳು ತೆಗೆದಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.

ಕಳ್ಳರು ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗ ಒಡೆದು ಗರ್ಭಗುಡಿಯ ಒಳಗೆ ಪ್ರವೇಶಿಸಿ ಬನಶಂಕರಿ ಮತ್ತು ಬನ್ನಿಕಾಳಮ್ಮ ದೇವರುಗಳ ಮೇಲಿದ್ದ 8 ಗ್ರಾಂ ತೂಕದ 4 ತಾಳಿ ಮತ್ತು 4 ಗುಂಡುಗಳು ಹಾಗೂ ಹುಂಡಿಯನ್ನು ಒಡೆದು ಹುಂಡಿಯ ಒಳಗಿದ್ದ ಸುಮಾರು ` 4 ಸಾವಿರ ನಗದು ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತದಾರರ ಪಟ್ಟಿ ಪ್ರಕಟ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಚುನಾವಣೆಯನ್ನು ಪ್ರಸಕ್ತ ಸಾಲಿನ ಏಪ್ರಿಲ್ ಒಳಗೆ ನಡೆಸಲು ಉದ್ದೇಶಿಸಲಾಗಿದ್ದು, ಮತದಾರರ ಪಟ್ಟಿಯನ್ನು ಫೆ. 14ರಂದು ಪ್ರಕಟಿಸಲಾಗಿದೆ.
ಪಟ್ಟಿಯ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಬರುವ ಮಾರ್ಚ್ 15ರ ಒಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯಲ್ಲಿ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆಕ್ಷೇಪಣೆಗಳಿದ್ದಲ್ಲಿ ಆಯಾ ತಾಲ್ಲೂಕಿನ ತಾಲ್ಲೂಕು ಕಚೇರಿಗಳಿಗೆ ನಿಗದಿತ ನಮೂನೆಗಳಲ್ಲಿ ಸಲ್ಲಿಸಬೇಕು. ಪರಿಷ್ಕರಿಸಿದ ಮತದಾರರ ಪಟ್ಟಿಯನ್ನು ಎಲ್ಲಾ ತಾಲ್ಲೂಕು ಕಚೇರಿಗಳಿಂದ ಮಾರ್ಚ್ 18ರ ಒಳಗಾಗಿ ಜಿಲ್ಲಾ ಚುನಾವಣಾ ಶಾಖೆಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

9ಕ್ಕೆ ಘಟಿಕೋತ್ಸವ
ಕುವೆಂಪು ವಿವಿ ಘಟಿಕೋತ್ಸವ ಮಾರ್ಚ್ 9ರಂದು ಜ್ಞಾನ ಸಹ್ಯಾದ್ರಿ ಕ್ಯಾಂಪ್‌ಹೌಸ್, ಶಂಕರಘಟ್ಟದಲ್ಲಿ ನಡೆಯಲಿದೆ ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.