ಚಿತ್ರದುರ್ಗ: ಕೈಗಾರಿಕೆಗಳ ಸಹಭಾಗಿತ್ವದಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಉದ್ಯೋಗಾವಕಾಶಗಳು ಹೇರಳವಾಗಿ ದೊರೆಯುವಂತೆ ಯೋಜನೆ ರೂಪಿಸಲಾಗಿದೆ ಎಂದು ಉದ್ಯೋಗ ಮತ್ತು ತರಬೇತಿ ಇಲಾಖೆ ಹಿರಿಯ ಜಂಟಿ ನಿರ್ದೇಶಕ ಈಶ್ವರ್ ನಾಯಕ್ ಹೇಳಿದರು.ನಗರದ ತರಾಸು ಜಿಲ್ಲಾ ರಂಗಮಂದಿರದಲ್ಲಿ ಬುಧವಾರ, ಭರಮಸಾಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ಕೇಂದ್ರ ಸರ್ಕಾರದ ಪಿಪಿಪಿ ಯೋಜನೆ ಅಡಿ ನೂತನವಾಗಿ ಸ್ಥಾಪಿಸಿರುವ ದ್ವಿಚಕ್ರ ವಾಹನ ಹಾಗೂ ಮೊಬೈಲ್ ದುರಸ್ತಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾವು ಕೈಗಾರಿಕೆಗಳೊಂದಿಗೆ ಕೈಜೋಡಿಸಿ ತರಬೇತಿ ನೀಡುತ್ತಿರುವುದರಿಂದ ವಿದ್ಯಾರ್ಥಿಗಳು ಐಟಿಐ ಮುಗಿಸಿ ಹೊರಗೆ ಬಂದಾಗ ಉದ್ಯೋಗ ಪಡೆಯುವುದು ಕಷ್ಟವಾಗುವುದಿಲ್ಲ. ಪ್ರತಿ ವರ್ಷ 2 ಲಕ್ಷ ವಿದ್ಯಾರ್ಥಿಗಳು ಐಟಿಐ ಪಡೆಯುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೂ ಉದ್ಯೋಗ ದೊರೆಯುತ್ತಿವೆ ಎಂದು ಪ್ರತಿಪಾದಿಸಿದರು.ಭರಮಸಾಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಎ. ಜಬೀವುಲ್ಲಾ ಮಾತನಾಡಿ, ಐಟಿಐ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭೂತದಂತೆ ಕಾಡುತ್ತಿದೆ. ಇದನ್ನು ಹೋಗಲಾಡಿಸಲು ಸ್ಪೋಕನ್ ಇಂಗ್ಲಿಷ್ ಉಚಿತವಾಗಿ ಬೋಧಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಿಲಿಕಾನ್ ಮೈಕ್ರೋಸಿಸ್ಟಮ್ಸ್ನ ಅಧ್ಯಕ್ಷ ಎ.ಎಸ್. ಜಯಚಂದ್ರ ಆರಾಧ್ಯ, ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್ ಖಾನ್, ಚಿತ್ರದುರ್ಗ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಎನ್. ಏಕನಾಥ್, ಬಿಸಿಐಸಿ ಕಾರ್ಯದರ್ಶಿ ಪೃಥ್ವಿ, ಶ್ರೀನಾಥ್ ಬೀರೂರ್, ಪಿ. ರವಿಚಂದ್ರ, ಜಿಯಾ ಉದ್ದೀನ್, ಬ್ರಾಹ್ಮಿ ಐಟಿಐ ಕಾಲೇಜಿನ ಪ್ರಾಂಶುಪಾಲ ರುದ್ರಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.