ADVERTISEMENT

ಕನ್ನಡದ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ:ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ

​ಪ್ರಜಾವಾಣಿ ವಾರ್ತೆ
Published 2 ಮೇ 2012, 9:55 IST
Last Updated 2 ಮೇ 2012, 9:55 IST

ನಾಯಕನಹಟ್ಟಿ: ಕನ್ನಡದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿ ಕನ್ನಡಾಂಬೆಯ ತೇರನ್ನು ಎಲ್ಲರ ಸಹಕಾರದೊಂದಿಗೆ ಎಳೆಯಲು ಶ್ರಮಿಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ನೂತನ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಹೇಳಿದರು.

ಇಲ್ಲಿನ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಮಂಗಳವಾರ ಆಗಮಿಸಿ ನಂತರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.ಸಾಹಿತ್ಯ ಪರಿಷತ್ತಿನಿಂದ ಕೇವಲ ಸಾಹಿತ್ಯ ಅಭಿವೃದ್ಧಿಯಲ್ಲದೇ ಜನ ಸಾಮಾನ್ಯರಿಗೆ ಬೇಕಾದ ಕೃಷಿ, ಆರೋಗ್ಯ ಮುಂತಾದ ಮಾಹಿತಿ ತಲುಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
 
ಮೇ 5ರಂದು ಚಿತ್ರದುರ್ಗದಲ್ಲಿ ವಿಜ್ಞಾನ ಮತ್ತು ಯೋಗ ಶಿಕ್ಷಣದ ಶಿಬಿರವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಆಂಧ್ರಪ್ರದೇಶದ ಡಿ. ಹಿರೇಹಾಳಿನ ಗಡಿನಾಡ ಕನ್ನಡ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶೆಟ್ಟೂರು ಸುರೇಶ್, ನೂತನ ಅಧ್ಯಕ್ಷರಿಗೆ ಗಡಿನಾಡ ಕನ್ನಡ ಶಾಲೆಗಳಲ್ಲಿ ಕನ್ನಡ ಪುಸ್ತಕದ ಸರಬರಾಜಿನ ಬಗ್ಗೆ ವಿವರಿಸಿದರು.

ಇದೂವರೆಗೂ ಆಂಧ್ರದಲ್ಲಿ ಗಡಿನಾಡ ಕನ್ನಡ ಶಾಲೆಗಳಿಗೆ ಕರ್ನಾಟಕ ಸರ್ಕಾರ ಉಚಿತವಾಗಿ ಕನ್ನಡ ಪುಸ್ತಕಗಳನ್ನು ವಿತರಿಸಲಾಗುತ್ತಿತ್ತು. ಈಗ ಹಣ ಕೊಟ್ಟು ಪುಸ್ತಕ ಪಡೆಯಿರಿ ಎಂದು ತಿಳಿಸಿದೆ. ಇದರಿಂದ ಗಡಿಭಾಗದಲ್ಲಿ ಕನ್ನಡ ಅಭಿವೃದ್ಧಿ ಮಾಡುವುದು ಕಷ್ಟ ಎಂದು ತಿಳಿಸಿದರು.

ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು, ಈ ಬಗ್ಗೆ ಗಡಿನಾಡ ಘಟಕದ ಅಧ್ಯಕ್ಷರ ಜತೆ ಚರ್ಚಿಸಿ ಉಚಿತವಾಗಿ ಕನ್ನಡ ಪುಸ್ತಕಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಚಿತ್ರದುರ್ಗ ಜಿಲ್ಲೆಯ ಗಡಿನಾಡ ಶಾಲೆಗಳಿಗೆ ವೈಯಕ್ತಿಕವಾಗಿ ಪುಸ್ತಕಗಳನ್ನು ವಿತರಿಸಲಾಗುವುದು ಎಂದು ಭರವಸೆ ನೀಡಿದರು. 

 ದೇವಸ್ಥಾನ ಸಮಿತಿಯ ಅಧ್ಯಕ್ಷ ಎಂ.ವೈ.ಟಿ. ಸ್ವಾಮಿ, ನಿವೃತ್ತ ಶಿಕ್ಷಕ ವೆಂಕಟೇಶ್ ರೆಡ್ಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಹಾಲಪ್ಪ, ದೇವಸ್ಥಾನ ಸಮಿತಿ ಸದಸ್ಯ ಉಮೇಶ್, ಜಗದೀಶ್, ಹುರುಳಿ ಬಸವರಾಜ್, ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.