ನಗರ ಪ್ರದೇಶದ ಮಹಿಳೆಯರು ಯಾಂತ್ರಿಕ ಉದ್ಯೋಗವನ್ನು ಅವಲಂಬಿಸಿದ್ದರೆ, ಗ್ರಾಮೀಣ ಪ್ರದೇಶದ ಮಹಿಳೆಯರು ಕೃಷಿ ಆಧಾರಿತ ಉದ್ಯೋಗ ಅವಲಂಬಿಸಿದ್ದಾರೆ.
ಚಿಕ್ಕಜಾಜೂರು ಸಮೀಪದ ಆಡನೂರು ಗ್ರಾಮದ ಬಹುತೇಕ ತೆಂಗಿನ ತೋಟಗಳಲ್ಲಿ ವಿವಿಧ ಬಗೆಯ ತರಕಾರಿ ಮತ್ತು ವಿವಿಧ ಬಗೆಯ ಸೊಪ್ಪನ್ನು ಬೆಳೆಯುತ್ತಾರೆ. ಚಂದ್ರಶೇಖರ್ ಎಂಬ ರೈತ ತಮ್ಮ ತೋಟದಲ್ಲಿ ಸುಮಾರು 4 ಗುಂಟೆ ಪ್ರದೇಶದಲ್ಲಿ ಕೊತ್ತಂಬರಿ, ಮೆಂತೆ, ಪಾಲಕ, ದಂಟು, ಸಬ್ಬಕ್ಷಿ ಸೊಪ್ಪನ್ನು ಬೆಳೆಸಿದ್ದಾರೆ. ಈ ಗ್ರಾಮದಲ್ಲಿ ಸುಮಾರು 35ರಿಂದ 40 ಕುಟುಂಬಗಳು ಸೊಪ್ಪಿನ ವ್ಯಾಪಾರದಿಂದ ಜೀವನ ಸಾಗಿಸುತ್ತಿರುವುದು ವಿಶೇಷ.
ಬೇಸಾಯ, ಬಿತ್ತನೆ ಬೀಜ, ನೀರಿನ ಖರ್ಚು ಎಂದು ಸುಮಾರು ನಾಲ್ಕು ಸಾವಿರ ಖರ್ಚು ಮಾಡಿದ್ದು, ಸೊಪ್ಪಿನ ಮಾರುಕಟ್ಟೆ ಬೆಲೆಯನ್ನು ಆಧರಿಸಿ ಗುತ್ತಿಗೆ ನೀಡಲಾಗುವುದು. ಬೆಲೆ ಕಡಿಮೆ ಆದಾಗ ರೂಪಾಯಿ ಎಂಟು ಸಾವಿರಕ್ಕೆ ಗುತ್ತಿಗೆ ಕೊಡುತ್ತೇನೆ. ಬೆಲೆ ಹೆಚ್ಚಾದಾಗ, ಮದುವೆ ಸೀಜನ್ಗಳಲ್ಲಿ ರೂ 14 ಸಾವಿರದಿಂದ 15 ಸಾವಿರಕ್ಕೆ ಗುತ್ತಿಗೆ ಕೊಡಲಾಗುವುದು ಎನ್ನುತ್ತಾರೆ ಚಂದ್ರಶೇಖರ್.
ಕೆಲವು ರೈತರು ಬೆಳೆದ ಸೊಪ್ಪನ್ನು ನೇರವಾಗಿ ಮಾರುಕಟ್ಟೆಗಳಿಗೆ ಕಳುಹಿಸಿದರೆ, ಮತ್ತೆ ಕೆಲವರು ಗ್ರಾಮದಲ್ಲಿನ ಕೆಲವು ಮಹಿಳಾ ವ್ಯಾಪಾರಿಗಳಿಗೆ ಗುತ್ತಿಗೆ ಕೊಡುತ್ತಾರೆ. 10ರಿಂದ 12 ಮಹಿಳೆಯರು ಸೊಪ್ಪಿನ ಜಮೀನನ್ನು ಗುತ್ತಿಗೆ ಪಡೆದು ಸುಮಾರು 15ರಿಂದ 18 ದಿನಗಳ ಕಾಲ ಒಟ್ಟಿಗೆ ಸೊಪ್ಪನ್ನು ಕಿತ್ತು ಪ್ರತಿಯೊಬ್ಬರೂ ಸಮನಾಗಿ ಸೊಪ್ಪಿನ ಕಟ್ಟುಗಳನ್ನು ಹಂಚಿಕೊಂಡು ನಿತ್ಯ ಸಮೀಪದ ಹೊಳಲ್ಕೆರೆ, ಚಿಕ್ಕಜಾಜೂರು ಮೊದಲಾದ ಕಡೆ ಮಾರಾಟ ಮಾಡಿಕೊಂಡು ಬರುತ್ತಾರೆ.
ಬೆಳಿಗ್ಗೆ 6.30ಕ್ಕೆ ಮನೆಯಿಂದ ಹೊರಟು 10 ಅಥವಾ 11 ಗಂಟೆಗೆ ಮನೆಗೆ ಹಿಂತಿರುಗುತ್ತೇವೆ. ಪ್ರತಿಯೊಬ್ಬರು ಖರ್ಚನ್ನು ಕಳೆದು ದಿನಕ್ಕೆ ಕನಿಷ್ಠ ನೂರು ರೂಪಾಯಿಗಳ ಆದಾಯ ಗಳಿಸುತ್ತೇವೆ. ಸೊಪ್ಪಿನ ಬೇಡಿಕೆ ಮತ್ತು ಬೆಲೆ ಹೆಚ್ಚಾದರೆ ಇನ್ನಷ್ಟು ಲಾಭ ಬರುವುದೆಂದು ಕರಿಯಮ್ಮ, ಮಂಜಮ್ಮ, ಗೌರಮ್ಮ, ಲಕ್ಕಮ್ಮ, ರುದ್ರಪ್ಪ ಹೇಳುತ್ತಾರೆ.
ಬಂದ ಹಣದಿಂದ ರೈತರಿಗೆ ಗುತ್ತಿಗೆ ಹಣವನ್ನು ನೀಡಿ ಉಳಿದ ಹಣದಲ್ಲಿ ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆಯನ್ನು ಮಾಡುತ್ತೇವೆ. ಸ್ತ್ರೀ ಶಕ್ತಿ ಸಂಘಗಳಲ್ಲಿ ಸ್ವಲ್ಪ ಹಣವನ್ನು ಉಳಿತಾಯ ಮಾಡಿ ಕಷ್ಟ ಕಾಲದಲ್ಲಿ ಅದನ್ನು ಬಳಸುತ್ತೇವೆ ಎಂದು ಜಯಮ್ಮ, ನೀಲಮ್ಮ, ಗೀತಮ್ಮ, ಸೌಭಾಗ್ಯ, ಲಕ್ಷ್ಮಮ್ಮ ಹೇಳುತ್ತಾರೆ.
ಸ್ವಾವಲಂಬನೆಯ ಬದುಕಿನಲ್ಲಿ ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕ ಸ್ವಾತಂತ್ರ್ಯ ಪಡೆಯುವುದರ ಜತೆ, ಕುಟುಂಬದ ನಿರ್ವಹಣೆಯಲ್ಲಿ ಸಮಾನತೆಯ ದುಡಿಮೆಯನ್ನು ಕಂಡುಕೊಳ್ಳುವ ಮೂಲಕ ತೃಪ್ತಿಯ ಬದುಕಿನೆಡೆಗೆ ಸಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.