ADVERTISEMENT

ಗ್ರಾಹಕರ ಹಕ್ಕು ಕುರಿತು ತಿಳಿವಳಿಕೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2011, 10:20 IST
Last Updated 1 ಆಗಸ್ಟ್ 2011, 10:20 IST
ಗ್ರಾಹಕರ ಹಕ್ಕು ಕುರಿತು ತಿಳಿವಳಿಕೆ ಅಗತ್ಯ
ಗ್ರಾಹಕರ ಹಕ್ಕು ಕುರಿತು ತಿಳಿವಳಿಕೆ ಅಗತ್ಯ   

ಚಿತ್ರದುರ್ಗ:  ವಸ್ತುಗಳ ಖರೀದಿ ಹಾಗೂ ಹಣ ಪಾವತಿಸಿ ಪಡೆಯುವಂತಹ ಸೇವೆಯಲ್ಲಿ ಗುಣಮಟ್ಟ ಹಾಗೂ ತೂಕ, ಅಳತೆಯಲ್ಲಿ ಮೋಸ ಕಂಡುಬಂದಲ್ಲಿ `ಗ್ರಾಹಕರ ಹಕ್ಕು ಸಂರಕ್ಷಣೆ ಕಾಯ್ದೆ~ ಅಡಿ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು. ಈ ಬಗ್ಗೆ ಗ್ರಾಹಕರಾದ ನಾವೆಲ್ಲರೂ ಜಾಗೃತರಾಗಬೇಕಾಗಿದೆ ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಜಿಲ್ಲಾ ಸಹಾಯಕ ನಿಯಂತ್ರಕ ಎಂ.ಎಸ್. ಕುಮಾರ್ ಅವರು ತಿಳಿಸಿದರು.

ನಗರದ ಎಸ್‌ಆರ್‌ಎಸ್ ಕಾಲೇಜಿನಲ್ಲಿ ಶನಿವಾರ ನಡೆದ `ಗ್ರಾಹಕರ ಜಾಗೃತಿ ಮತ್ತು ಅರಿವು~ ಕಾರ್ಯಕ್ರಮದಲ್ಲಿ ಗ್ರಾಹಕರ ಸಂರಕ್ಷಣೆ ಕಾಯ್ದೆ ಹಾಗೂ ಕಾನೂನು ಮಾಪನಾ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು.

ವಸ್ತುಗಳ ಖರೀದಿ ಸಂದರ್ಭದಲ್ಲಿ ಸರಿಯಾದ ಬೆಲೆ ನೀಡುವಾಗ ಸರಿಯಾದ ಗುಣಮಟ್ಟದ ಹಾಗೂ ನಿಶ್ಚಿತ ಅಳತೆಯನ್ನು ಖಾತ್ರಿ ಪಡಿಸಿಕೊಂಡು ವಸ್ತುಗಳನ್ನು ಪಡೆಯಬೇಕೆಂದು ತಿಳಿಸಿದರು.

ವಸ್ತುಗಳ ಖರೀದಿಯಲ್ಲಿ ಮೋಸ ಮತ್ತು ಅಳತೆ, ತೂಕದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಜಿಲ್ಲಾ ಗ್ರಾಹಕರ ವೇದಿಕೆಗೆ ಅಗತ್ಯ ದಾಖಲೆಯೊಂದಿಗೆ 90 ದಿವಸದ ಒಳಗೆ ದೂರು ಸಲ್ಲಿಸಿ ಪರಿಹಾರ ಪಡೆಯಬಹುದಾಗಿದ್ದು, ಗ್ರಾಹಕರ ಸಂರಕ್ಷಣೆಗಾಗಿ ಜಾರಿಗೊಳಿಸಿರುವ ಕಾಯ್ದೆಯ ಉಪಯೋಗ ಪಡೆಯುವಲ್ಲಿ ಜಾಗೃತರಾಗಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲಾ ವಾರ್ತಾಧಿಕಾರಿ ಎಸ್. ಮಹೇಶ್ವರಯ್ಯ ಮಾತನಾಡಿ, ಗ್ರಾಹಕರ ಹಿತರಕ್ಷಣೆಗಾಗಿ ಜಾರಿಗೊಳಿಸಿರುವ ಕಾಯ್ದೆ ಕಾನೂನುಗಳ ಬಗ್ಗೆ ಮಾಹಿತಿ ಪಡೆದಿರಬೇಕು. ಮಾರುಕಟ್ಟೆ ಹಾಗೂ ವಸ್ತುಗಳ ಖರೀದಿ ಸೇವೆಯಲ್ಲಿ ನಡೆಯುತ್ತಿರುವಂತಹ ಮೋಸ ಕೃತ್ಯಗಳನ್ನು ತಡೆಯಬಹುದು. ಖರೀದಿಸುವ ವಸ್ತುಗಳ ಕುರಿತು ಗ್ರಾಹಕರು ಸರಿಯಾದ ಮಾಹಿತಿ ಪಡೆಯಬೇಕು. ಅನಕ್ಷರಸ್ಥರಿಗೆ ವಿದ್ಯಾವಂತರು ಇದರ ಬಗ್ಗೆ ಜಾಗೃತಿ ಅರಿವು ಮೂಡಿಸುವಂತಹ ಕಾರ್ಯ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆ ತಾಂತ್ರಿಕ ಅಧಿಕಾರಿ ಬಸವರಾಜ ಸೊಪ್ಪಿನಮಠ ಮಾತನಾಡಿ, ವಸ್ತುಗಳನ್ನು ಖರೀದಿಸಿದಾಗ ಕಡ್ಡಾಯವಾಗಿ ರಸೀದಿಯನ್ನು ಪಡೆಯುವ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕು. ಯುವವಿದ್ಯಾರ್ಥಿಗಳು ಈ ಬಗ್ಗೆ ತಮ್ಮ ಪೋಷಕರಿಗೆ, ಅಕ್ಕ-ಪಕ್ಕದ ಜನರಲ್ಲಿ ತಿಳಿವಳಿಕೆಗೆ ತರಬೇಕು ಎಂದು  ಹೇಳಿದರು. ಎಸ್‌ಆರ್‌ಎಸ್ ಕಾಲೇಜಿನ ಪ್ರಾಂಶುಪಾಲ ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.