ADVERTISEMENT

ಚಿಕೂನ್‌ಗುನ್ಯಾ ಹರಡುವ ಭೀತಿ

ದೇವಸಮುದ್ರ ಹೋಬಳಿ ಗ್ರಾಮಗಳಲ್ಲಿ ಸ್ವಚ್ಛತೆ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 6:42 IST
Last Updated 8 ಡಿಸೆಂಬರ್ 2012, 6:42 IST

ಮೊಳಕಾಲ್ಮುರು: ತಾಲ್ಲೂಕಿನ ದೇವಸಮದ್ರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು ಚಿಕೂನ್‌ಗುನ್ಯಾ  ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ.

ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ದೇವಸಮದ್ರ ಹೋಬಳಿಯಲ್ಲಿ ಚಿಕೂನ್‌ಗುನ್ಯಾ ಕಾಣಿಸಿಕೊಂಡಿದ್ದು ಇಲ್ಲಿ ಪ್ರಮುಖ ಅಂಶ. ರೋಗ ಪ್ರಥಮವಾಗಿ ಕಾಣಿಸಿಕೊಂಡು 5 ವರ್ಷಗಳು ಕಳೆದರೂ ಸಹ ಇನ್ನೂ ಪೂರ್ಣವಾಗಿ ಅನೇಕರು ರೋಗ ಲಕ್ಷಣಗಳಿಂದ ಹೊರಬಂದಿಲ್ಲ ಎಂಬ ಆತಂಕ ಸ್ಥಿತಿಯಲ್ಲಿಯೇ ಮತ್ತೆ ಕೆಲ ಗ್ರಾಮಗಳಲ್ಲಿ ಚಿಕೂನ್‌ಗುನ್ಯಾ ರೋಗ ಲಕ್ಷಣಗಳು ಮರುಕಳಿಸುವ ಮೂಲಕ ಸಾರ್ವಜನಿಕರ ನಿದ್ದೆಗೆಡಿಸಿದೆ. ಆತಂಕಕ್ಕೆ ಕಾರಣವಾಗಿದೆ.

ರಾಂಪುರ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಹುಚ್ಚಪ್ಪ ಈಚೆಗೆ ನೀಡಿದ ಮಾಹಿತಿ ಪ್ರಕಾರ ಈ ಕೇಂದ್ರ ವ್ಯಾಪ್ತಿಯ ಜೆ.ಬಿ.ಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿ ಹೊಸಳ್ಳಿಯಲ್ಲಿ 7 ಪ್ರಕರಣ, ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ವೆಂಕಟಾಪುರದಲ್ಲಿ 20-25 ಚಿಕೂನ್‌ಗುನ್ಯಾ  ರೋಗ ಲಕ್ಷಣಗಳ ಪ್ರಕರಣಗಳು ಕಂಡುಬಂದಿದ್ದವು ಎಂದು ಹೇಳಿದರು.

ಈ ಎರಡೂ ಗ್ರಾಮಗಳಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಲಾರ್ವ ಸರ್ವೇ ಮತ್ತು ಫಾಗಿಂಗ್ ಮಾಡಿಸಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನೂತನವಾಗಿ ಪ್ರಕರಣಗಳು ವರದಿಯಾಗಿಲ್ಲ ಎಂದರು. ಆದರೆ, ಬುಧವಾರವೂ ವೆಂಕಟಾಪುರಕ್ಕೆ ವೈದ್ಯರು ಭೇಟಿ ನೀಡಿ ಮಾತ್ರೆ ವಿತರಣೆ ಮಾಡಿದ್ದಾರೆ ಎಂದು ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.

ಸಂಬಂಧಪಟ್ಟ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಕುರಿತು ಗಮನಹರಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ರೋಗ ಉಲ್ಬಣಕ್ಕೆ ಅವಕಾಶ ನೀಡಬಾರದು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.