ADVERTISEMENT

ಚಿರತೆ ದಾಳಿಗೆ ಮೇಕೆ ಮರಿ ಬಲಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 6:48 IST
Last Updated 7 ಡಿಸೆಂಬರ್ 2013, 6:48 IST

ಮೊಳಕಾಲ್ಮುರು: ಶಂಕಿತ ಚಿರತೆ ದಾಳಿಯಿಂದಾಗಿ ಮೂರು ಮೇಕೆ ಮರಿಗಳು ಮೃತಪಟ್ಟಿರುವ ಘಟನೆ ಗುರುವಾರ ಸಂಜೆ
ಪಟ್ಟಣದ ಕರಿಯಪ್ಪನಹಟ್ಟಿಯಲ್ಲಿ ನಡೆದಿದೆ.

ಮೇಕೆ ಮರಿಗಳು ಸಿರಿಯಪ್ಪ ಅವರಿಗೆ ಸೇರಿವೆ. ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ವಲಯ ಅರಣ್ಯಾಧಿಕಾರಿ ಮಲ್ಲೇಶಪ್ಪ, ‘ಮೇಕೆ ಮರಿಗಳು ಚಿರತೆ ದಾಳಿಯಿಂದ ಸತ್ತಿರುವುದು ಖಚಿತವಾಗಿದೆ. ಈ ಹಿಂದೆಯೂ ಸ್ಥಳೀಯ ಕೋಟೆ ಬಡಾವಣೆಯಲ್ಲಿ ರಾತ್ರಿ ವೇಳೆ ಮೇಕೆಗಳ ಮೇಲೆ ಚಿರತೆ ದಾಳಿ ಮಾಡಿದೆ. ಆಗ ನಾಯಿಯೊಂದು ಬೊಗಳಿದ್ದು ಜನರು ಹೊರಗಡೆ ಬಂದು ನೋಡಿದಾಗ ಚಿರತೆ ಓಡಿ ಹೋಯಿತು ಎಂಬ ಮಾಹಿತಿ ಲಭ್ಯವಾಗಿದೆ’ ಎಂದರು.

ತಾಲ್ಲೂಕಿನ ಪಕ್ಕುರ್ತಿ ಸಮೀಪದ ಎನ್‌.ಆರ್‌.ಕೊಂಡಾಪುರ ಬಳಿ ಸಹ ಈಚೆಗೆ ಚಿರತೆ ದಾಳಿ ಪ್ರಕರಣ ನಡೆದಿದ್ದು, ಇದಾದ ನಂತರ ಪಟ್ಟಣದಲ್ಲಿ ಪ್ರಕರಣ ವರದಿಯಾಗಿದೆ. ಹಲವು ಮೇಕೆಗಳು ಗುಡ್ಡ ಸಮೀಪದಲ್ಲಿ ದಾಳಿಗೆ ಬಲಿಯಾಗಿದ್ದರೂ ಸಾರ್ವಜನಿಕರು ಮಾಹಿತಿ ನೀಡಿಲ್ಲ. ಆದ್ದರಿಂದ ಗುಡ್ಡ ಸಮೀಪ ಮೇಕೆ, ಕುರಿ, ದನ ಮೇಯಿಸುವವರು ಎಚ್ಚರದಿಂದ ಇರಬೇಕು. ರಾತ್ರಿ ವೇಳೆ ಜಾನುವಾರುಗಳನ್ನು ಹೊರಗಡೆ ಕಟ್ಟಿಹಾಕಬಾರದು. ಚಿರತೆ ಇರುವುದು ಕಂಡುಬಂದಲ್ಲಿ ತಕ್ಷಣವೇ ವಲಯ ಅರಣ್ಯ ಇಲಾಖೆ ಗಮನಕ್ಕೆ ತಂದಲ್ಲಿ ಮುಂದಿನ ಕ್ರಮ ಕೈಗೊಳ್ಳಲು ಅನುಕೂಲ ಆಗಲಿದೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮಲ್ಲೇಶಪ್ಪ ಮನವಿ ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.