ಚಿತ್ರದುರ್ಗ: ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಪ್ರತಿ ಮತಗಟ್ಟೆ ಸಿಬ್ಬಂದಿಗೆ ವಿತರಿಸಿರುವ ಚುನಾವಣೆ ಪರಿಕರಗಳ ಕಿಟ್ ನಲ್ಲಿ ಈ ಬಾರಿ 'ಪ್ರಥಮ ಚಿಕಿತ್ಸೆ' ಪೆಟ್ಟಿಗೆ ಸೇರಿಸಲಾಗಿದೆ.
ಪೆಟ್ಟಿಗೆಯಲ್ಲಿ ಐದು ತರಹದ ಮಾತ್ರೆಗಳಿವೆ. ನಾಲ್ಕು ತರಹದ ತಲಾ 10 ಮಾತ್ರೆಗಳ ಒಂದು ಪಟ್ಟಿಯನ್ನು ನೀಡಲಾಗಿದೆ. ಮಾತ್ರೆಗಳ ಜ್ವರ, ಮೈಕೈ ನೋವು, ಶೀತ, ನೆಗಡಿ, ಕೆಮ್ಮು ಅಲರ್ಜಿ, ವಾಂತಿ, ಹೊಟ್ಟೆ ಉರಿ ನಿಯಂತ್ರಿಸುವ ಮಾತ್ರೆಗಳನ್ನು ನೀಡಲಾಗಿದೆ. ಒಆರ್ಎಸ್ ಪೊಟ್ಟಣದ 5 ಸ್ಟ್ರಿಪ್ ಗಳನ್ನು ಕೊಡಲಾಗಿದೆ. ನಿಶ್ಯಕ್ತಿ / ಬಳಲಿಕೆ ನಿವಾರಿಸುವ ಒಆರ್ಎಸ್ ಪುಡಿಯನ್ನು ಬಳಸುವ ವಿಧಾನವನ್ನು ಮುದ್ರಿಸಲಾಗಿದೆ. ಪೆಟ್ಟಿಗೆಯ ಮೇಲ್ಭಾಗದಲ್ಲಿ ಮಾತ್ರೆ ತೆಗೆದುಕೊಳ್ಳುವ, ಡೋಸೇಜ್, ವಿಧಾನ ಮತ್ತು ಸಮಯವನ್ನು ಉಲ್ಲೇಖಿಸಲಾಗಿದೆ.
'ಬಿಸಿಲು ಹೆಚ್ಚಾಗಿರುವುದರಿಂದ ಕಾಫಿ/ ಟೀ ಹಾಗೂ ಅತಿ ಸಕ್ಕರೆ ಅಂಶವುಳ್ಳ ಪಾನೀಯವನ್ನು ಅತಿಯಾಗಿ ಸೇವಿಸಬೇಡಿ. ಉಷ್ಣತೆಯಿಂದ ಹೆಚ್ಚಾದ ವ್ಯಕ್ತಿಯನ್ನು ತುಂಬಾ ತಣ್ಣಗಿನ/ಶೀತಲೀಕರಿಸಿದ ನೀರಿನಿಂದ ಒರೆಸಬೇಡಿ' ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ.
'ಆಪತ್ಕಾಲದಲ್ಲಿ ನೀವು ಕೈಗೊಳ್ಳುವ ಶೀಘ್ರ ಸಮಯೋಚಿತ, ಪ್ರಜ್ಞಾಪೂರ್ವಕ ಕ್ರಮವು ಅಘಾತಕ್ಕೊಳಗಾದ ವ್ಯಕ್ತಿಯ ಪ್ರಾಣ ಉಳಿಸಬಲ್ಲದು' ಎಂಬ ಘೋಷವಾಖ್ಯವನ್ನು ಅದರ ಮೇಲೆ ಮುದ್ರಿಸಲಾಗಿದೆ.
'ಸಿಬ್ಬಂದಿಗೆ ಪ್ರಥಮ ಚಿಕಿತ್ಸೆ ಕಿಟ್ ನೀಡಲಾಗಿದ್ದು, ಮತಗಟ್ಟೆಗಳಲ್ಲಿ ಸಹಾಯಕ್ಕಾಗಿ ಆಶಾಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ತುರ್ತು ಆರೋಗ್ಯ ರಕ್ಷಣೆಗಾಗಿ ಅಂಬುಲೆನ್ಸ್ ಗಳನ್ನು ಸಿದ್ಧಗೊಳಿಸಲಾಗಿದೆ' ಎಂದು ತಾಲ್ಲೂಕು ವೈದ್ಯಾಧಿಕಾರಿ ಟಿ.ಎಚ್. ಫಾಲಾಕ್ಷ 'ಪ್ರಜಾವಾಣಿ'ಗೆ ತಿಳಿಸಿದರು.
ಜಾಗೃತಿ, ಸಲಹೆ
ಪ್ರಥಮ ಚಿಕಿತ್ಸೆ ಪೆಟ್ಟಿಗೆಯ ಮೇಲೂ 'ಪ್ರಜಾಪ್ರಭುತ್ವ ನಮ್ಮಿಂದ, ಮತದಾನ ಹೆಮ್ಮೆಯಿಂದ' ಎಂಬ ಮತದಾನ ಕುರಿತು ಜಾಗೃತಿ ಮೂಡಿಸುವ ಘೋಷವಾಕ್ಯಗಳಿವೆ. 'ಚುನಾವಣಾ ಕರ್ತವ್ಯವನ್ನು ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ನಿರ್ವಹಿಸಿ' ಎಂದು ಮತಗಟ್ಟೆ ಸಿಬ್ಬಂದಿಗೂ ಸಲಹೆ ನೀಡುವಂತಹ ಮಾಹಿತಿ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.