ADVERTISEMENT

ಜಾನಪದ ಕಲೆ ಉಳಿಸಿ- ಬೆಳೆಸಲು ಸಲಹೆ

ಮೊಳಕಾಲ್ಮುರು: ಜಾನಪದ ಪರಿಷತ್ ತಾಲ್ಲೂಕು ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2013, 9:31 IST
Last Updated 31 ಜನವರಿ 2013, 9:31 IST
ಮೊಳಕಾಲ್ಮುರಿನಲ್ಲಿ ಬುಧವಾರ ನಡೆದ ಜಾನಪದ ಪರಿಷತ್ ತಾಲ್ಲೂಕು ಘಟಕ ಉದ್ಘಾಟನೆ ಹಾಗೂ ಜಾನಪದ ಮೇಳವನ್ನು ಪರಿಷತ್ ಜಿಲ್ಲಾ ಅಧ್ಯಕ್ಷ ಡಾ.ಕರಿಯಪ್ಪ ಮಾಳಿಗೆ ಉದ್ಘಾಟಿಸಿದರು.
ಮೊಳಕಾಲ್ಮುರಿನಲ್ಲಿ ಬುಧವಾರ ನಡೆದ ಜಾನಪದ ಪರಿಷತ್ ತಾಲ್ಲೂಕು ಘಟಕ ಉದ್ಘಾಟನೆ ಹಾಗೂ ಜಾನಪದ ಮೇಳವನ್ನು ಪರಿಷತ್ ಜಿಲ್ಲಾ ಅಧ್ಯಕ್ಷ ಡಾ.ಕರಿಯಪ್ಪ ಮಾಳಿಗೆ ಉದ್ಘಾಟಿಸಿದರು.   


ಮೊಳಕಾಲ್ಮುರು: ಜಾನಪದ ಕಲೆಗಳು ಮನೋವಿಕಾಸಕ್ಕೆ ಪೂಕರವಾಗಿವೆ. ಅದನ್ನು ಮನಗಂಡು ಜಾನಪದ ವಿವಿ ಸ್ಥಾಪನೆ ಮಾಡಲಾಗಿದೆ. ಎಲ್ಲಾ ಬಗೆಯ ಆಧುನಿಕ ಕಲೆಗಳಿಗೆ ಜಾನಪದ ಕಲೆಗಳು ಬುನಾದಿಯಾಗಿವೆ. ಜಾನಪದ ತಜ್ನ ಡಾ.ಎಚ್.ಎಲ್. ನಾಗೇಗೌಡ ಸ್ಥಾಪಿಸಿದ ಜಾನಪದ ಪರಿಷತ್ ಅಡಿಯಲ್ಲಿ ಕಲೆಗಳ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದು, ಈ ಬಗ್ಗೆ ಮಾಹಿತಿ ಇಲ್ಲದ ಕಾರಣ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಅಪ್ಪಟ ಗ್ರಾಮೀಣ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹ ನೀಡುವ ಜತೆಗೆ ಸರ್ಕಾರದಿಂದ ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕೊಡಿಸಲು ಪರಿಷತ್ ಕ್ರಮ ಕೈಗೊಂಡಿದೆ. ಆಧುನಿಕ ಕಲಾವಿದರಿಗೆ ಹೋಲಿಕೆ ಮಾಡಿದರೆ ಗ್ರಾಮೀಣ ಜಾನಪದ ಕಲಾವಿದರಿಗೆ ಸಿಗುತ್ತಿರುವ ಗೌರವ, ಸಂಭಾವನೆ ಅತ್ಯಂತ ಕೀಳಾಗಿದೆ. ಈ ನಿಟ್ಟಿನಲ್ಲಿ ಪರಿಷತ್ ಅನೇಕ ಪರಿಹಾರ ಕಾರ್ಯಕ್ರಮ ರೂಪಿಸಿ ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಯತ್ನ ಮಾಡಲಿದೆ ಎಂದು ತಿಳಿಸಿದರು.

ಪರಿಷತ್ ರಾಜ್ಯ ಸಂಚಾಲಕ ಎಸ್. ಬಾಲಾಜಿ ಮಾತನಾಡಿ, ಮೂಲೆ ಗುಂಪಾಗಿರುವ ಜಾನಪದ ಕಲಾವಿದರ ಅನುಭವವನ್ನು ಮುಂದಿನ ದಿನಗಳಲ್ಲಿ ಪರಿಷತ್ ಬಳಕೆ ಮಾಡಿಕೊಳ್ಳಲಿದೆ. ಹಿಂದುಳಿದ ಜಿತ್ರದುರ್ಗ ಜಿಲ್ಲೆಯಲ್ಲಿ ಸಾಕಷ್ಟು ವಿಭಿನ್ನ ಕಲಾವಿದರು ಇರುವುದು ಗಮನಕ್ಕೆ ಬಂದಿದ್ದು, ಬೆಳಕಿಗೆ ತರುವ ಕಾರ್ಯ ಮಾಡುವುದಾಗಿ ಹೇಳಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್.ಟಿ. ನಾಗರೆಡ್ಡಿ ಜಾನಪದ ಮೇಳಕ್ಕೆ ಚಾಲನೆ ನೀಡಿದರು. ಪರಿಷತ್ ತಾಲ್ಲೂಕು ಅಧ್ಯಕ್ಷ ಡಿ.ಒ. ಮೊರಾರ್ಜಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಮಾರಕ್ಕ ಓಬಯ್ಯ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಬಲ್ಕಿಶ್‌ಬಾನು, ಸದಸ್ಯ ಕೆ.ಜಿ. ಪಾರ್ಥಸಾರಥಿ, ಚಿತ್ರ ನಿರ್ದೇಶಕ ಜಿ. ಶ್ರೀನಿವಾಸಮೂರ್ತಿ, ಬಂಡಾಯ ಸಾಹಿತ್ಯ ವೇದಿಕೆ ಸಂಚಾಲಕ ಕೆ.ಜಿ. ವೆಂಕಟೇಶ್, ಜಿ.ಪಿ. ಸುರೇಶ್, ಪರಿಷತ್ ಕಾರ್ಯದರ್ಶಿ ವಿರೂಪಾಕ್ಷಪ್ಪ, ಗೋವಿಂದ್, ಪಿ. ಮಂಜುನಾಥ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.