ಚಿತ್ರದುರ್ಗ: ಯಾರೇ ವಿರೋಧಿಸಲಿ, ನಮ್ಮ ಸರ್ಕಾರ ಟಿಪ್ಪು ಜಯಂತಿ ಆಚರಣೆ ನಿಲ್ಲಿಸುವುದಿಲ್ಲ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಎಚ್. ಆಂಜನೇಯ ಸ್ಪಷ್ಟಪಡಿಸಿದರು.
ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಶಿಷ್ಟಾಚಾರದ ಪ್ರಕಾರ ಆಯಾ ಭಾಗದ ಜನಪ್ರತಿನಿಧಿಗಳ ಹೆಸರು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಇಷ್ಟವಿಲ್ಲದವರು ಕಾರ್ಯಕ್ರಮಕ್ಕೆ ಹೋಗದಿದ್ದರಾಯಿತು. ಅದು ಬಿಟ್ಟು ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸಬೇಡಿ ಎಂದು ಹೇಳುವುದು ಎಷ್ಟು ಸರಿ' ಎಂದು ಟಿಪ್ಪು ಜಯಂತಿಯ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಬಾರದು ಎಂಬ ಬಿಜೆಪಿಯ ಕೆಲ ನಾಯಕರ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಬಿಜೆಪಿ ನಾಯಕ ಯಡಿಯೂರಪ್ಪ ಅವರು ಕಲ್ಲಿದ್ದಲು ಹಗರಣದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು 'ಅವರಿಗೆ ಮುಂದಿನ ಚುನಾವಣೆಯಲ್ಲಿ ವಿರೋಧಪಕ್ಷದ ಸ್ಥಾನ ಸಿಗುವುದು ಅನುಮಾನ ಕಾಡುತ್ತಿರಬೇಕು ಅದಕ್ಕಾಗಿಯೇ ಈ ರೀತಿ ಹತಾಶೆಯಿಂದ ಆರೋಪ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ನಾಲ್ಕೂವರೆ ವರ್ಷಗಳಿಂದ ಯಾವುದೇ ಹಗರಣಗಳಿಲ್ಲದೇ ಸ್ವಚ್ಛ ಆಡಳಿತ ನೀಡಿದೆ. ಬಿಜೆಪಿಯವರ ಯಾವ ಆರೋಪಗಳಲ್ಲೂ ಹುರುಳಿಲ್ಲ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.