ADVERTISEMENT

ತಾಯಿ ಮರಣ ತಪ್ಪಿಸಲು ಎಚ್ಚರಿಕೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 7:30 IST
Last Updated 22 ಸೆಪ್ಟೆಂಬರ್ 2011, 7:30 IST

ಚಳ್ಳಕೆರೆ: ಜಾಗತಿಕಮಟ್ಟದಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳು ಶಾಂತಿ, ಸೌಹಾರ್ದತೆಯಿಂದ ಇದ್ದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎ. ತಿಮ್ಮಣ್ಣ ಅಭಿಪ್ರಾಯಪಟ್ಟರು.

ಚಳ್ಳಕೆರೆ ಪಟ್ಟಣದ ಕಸ್ತೂರ ಬಾ ವಸತಿಶಾಲೆಯಲ್ಲಿ ಬುಧವಾರ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ `ಅಂತರರಾಷ್ಟ್ರೀಯ ಶಾಂತಿ ದಿನಾಚರಣೆ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಪೀಳಿಗೆಯನ್ನು ಶಿಕ್ಷಣ ಪಡೆಯುವ ಹಂತದಲ್ಲಿ ಶಾಂತಿ, ಸಮಬಾಳ್ವೆಯಿಂದ ಬದುಕುವಂತೆ ಶಿಕ್ಷಕರಾದವರು ಪ್ರೇರೇಪಿಸಬೇಕು. ಆ ನಿಟ್ಟಿನಲ್ಲಿ ಮುಂದಿನ ಭವಿಷ್ಯತ್ತಿನ ವಾರಸುದಾರರನ್ನು ನಿರ್ಮಾಣ ಮಾಡುವ ಗುರುತರ ಜವಾಬ್ಧಾರಿ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.

ಎಸ್.ಕೆ. ಮುರಳಿ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದನ್ನು ಅರಿತು ಶಾಂತಿಯಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು. ವಿಶ್ವಶಾಂತಿಗಾಗಿ ನಾವೆಲ್ಲರೂ ಶ್ರಮಿಸುತ್ತಾ ಸಹಕರಿಸುವ ಮನೋಭಾವ ಮೈಗೂಡಿಸಿಕೊಳ್ಳುವ ಕಡೆಗೆ ಚಿಂತನೆ ಮಾಡಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಬಿ.ಕೆ. ರಾಜಶೇಖರಪ್ಪ, ಆರ್. ತಿಪ್ಪೇಸ್ವಾಮಿ, ವಕೀಲ ಜಿ.ಆರ್. ಅಶ್ವತ್ಠ್ ನಾಯಕ, ಪುರಸಭಾ ಸದಸ್ಯ ಎಸ್.ಟಿ. ವಿಜಯ್, ಲಯನ್ಸ್ ಕ್ಲಬ್‌ನ ಎನ್.ಟಿ. ಪ್ರಕಾಶ್, ಅನ್ನಪೂರ್ಣ ಪ್ರಕಾಶ್, ಎಸ್‌ಬಿಎಂ ವ್ಯವಸ್ಥಾಪಕ ವೈ.ಜಿ. ಪ್ರಸಾದ್, ಹಿರಿಯ ವಕೀಲ ಶಂಕರಗುಳ್ಳಿ, ಕಸ್ತೂರ ಬಾ ವಸತಿಶಾಲೆಯ ಮುಖ್ಯ ಶಿಕ್ಷಕಿ ಶಿವಲೀಲಾ ಮುಂತಾದವರು ಉಪಸ್ಥಿತರಿದ್ದರು.

`ಬರಪೀಡಿತ~ವೆಂದು  ಘೋಷಿಸಿ
ಪ್ರಸಕ್ತ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಆಗದೇ ಚಳ್ಳಕೆರೆ ತಾಲ್ಲೂಕಿನ ತಳಕು, ಪರಶುರಾಂಪುರ, ನಾಯಕನಹಟ್ಟಿ, ಕಸಬಾ ಹಾಗೂ ತುರುವನೂರು ಹೋಬಳಿಗಳಲ್ಲಿ ರೈತರು ಗುಳೇ ಹೋಗುವ ಸ್ಥಿತಿಯಲ್ಲಿದ್ದಾರೆ.

ಸರ್ಕಾರ ಕೂಡಲೇ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಕಾಂಗ್ರೆಸ್ ಮುಖಂಡ ಟಿ. ರಘುಮೂರ್ತಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಡಾ. ನಂಜುಂಡಪ್ಪ ವರದಿ ಪ್ರಕಾರ ರಾಜ್ಯದಲ್ಲಿ ಅತೀ ಹಿಂದುಳಿದ ತಾಲ್ಲೂಕು ಹಾಗೂ ಅತೀ ಕಡಿಮೆ ಮಳೆ ಬೀಳುವ ಪ್ರದೇಶ ಎಂದು ಹೆಸರಾಗಿರುವ ಚಳ್ಳಕರೆ ತಾಲ್ಲೂಕಿನ ಜನರಿಗೆ ಸರ್ಕಾರ ನೆರವಿನ ಹಸ್ತ ಚಾಚಬೇಕಿದೆ.

ಬರಪೀಡಿತ ಪ್ರದೇಶ ಎಂದು ಘೋಷಿಸಿ ಜಾನುವಾರುಗಳಿಗೆ ಗೋ ಶಾಲೆಗಳನ್ನು ಪ್ರಾರಂಭಿಸಿ ಅಗತ್ಯ ಮೇವು ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸರ್ಕಾರ ವಿಶೇಷ ಅನುದಾನ ನೀಡಬೇಕು. ಮೂಲಸೌಕರ್ಯಕ್ಕೆ ಒತ್ತು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.