ADVERTISEMENT

ನೇಕಾರರ ಅಭಿವೃದ್ಧಿಗೆ ಪ್ರತ್ಯೇಕ ಬಜೆಟ್ ಅಗತ್ಯ

​ಪ್ರಜಾವಾಣಿ ವಾರ್ತೆ
Published 21 ಜೂನ್ 2012, 4:55 IST
Last Updated 21 ಜೂನ್ 2012, 4:55 IST

ಚಳ್ಳಕೆರೆ: ಸುವರ್ಣ ವಸ್ತ್ರ ನೀತಿ ಅಡಿಯಲ್ಲಿ ಸಾವಿರಾರು ಗ್ರಾಮೀಣ ಮಹಿಳೆಯರು ಉಣ್ಣೆ ನೇಯ್ಗೆ ಕಾರ್ಯದಲ್ಲಿ ತರಬೇತಿ ಪಡೆಯುವ ಮೂಲಕ ಸ್ವಾವಲಂಭಿಗಳಾಗುತ್ತಿದ್ದಾರೆ ಎಂದು ರಾಜ್ಯ ಜವಳಿ ಮತ್ತು ಕೈಮಗ್ಗ ಅಭಿವೃದ್ಧಿ ಆಯುಕ್ತ ಡಿ. ವೆಂಕಟೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಗೊರ‌್ಲಕಟ್ಟೆ ರಸ್ತೆಯ ಪಾದಗಟ್ಟೆ ಹತ್ತಿರದ ಉಣ್ಣೆ ಕೈ ಮಗ್ಗ ನೇಕಾರರ ಖಾದಿಯೇತರ ಸಹಕಾರ ಮಹಾ ಮಂಡಳಕ್ಕೆ ಬುಧವಾರ ಭೇಟಿ ನೀಡಿ ಅವರು ಮಾತನಾಡಿದರು.

ಸಹಕಾರ ಸಂಘಗಳಲ್ಲಿ ಎಲ್ಲ ಸದಸ್ಯರು ಸೌಹಾರ್ದದಿಂದ ನಡೆದುಕೊಂಡಾಗ ಮಾತ್ರ ಸಂಘಗಳು ಪ್ರಗತಿಯತ್ತ ಸಾಗುತ್ತವೆ. ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಪಾರಂಪರಿಕ ವೃತ್ತಿ ಮತ್ತು ಕೌಶಲಗಳಿಗೆ ಪೂರಕವಾಗಿ ಉದ್ಯೋಗ ಸೃಷ್ಟಿಸಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

ಪ್ರಸ್ತುತ ಕಾಲಘಟ್ಟದಲ್ಲಿ ನೇಕಾರರು ಸಂಕಷ್ಟದಲ್ಲಿದ್ದಾರೆ. ಬದಲಾವಣೆ ಬಯಸುತ್ತಿರುವ ಇಂದಿನ ಜನಾಂಗಕ್ಕೆ ನೇಕಾರರ ವೃತ್ತಿಯಿಂದ ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಇಲ್ಲದಂತಾಗಿದೆ. ಅದ್ದರಿಂದ, ನೇಕಾರ ವೃತ್ತಿ ಪ್ರೋತ್ಸಾಹಕ್ಕೆ ಸರ್ಕಾರ ನೀಡುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ನುಡಿದರು.

ಮಹಾಮಂಡಳದ ಅಧ್ಯಕ್ಷ ಆರ್. ಮಲ್ಲೇಶಪ್ಪ ಮಾತನಾಡಿ, ಸಂಕಷ್ಟದಲ್ಲಿರುವ ನೇಕಾರರಿಗೆ ಸರ್ಕಾರ ಪ್ರತ್ಯೇಕ ಬಜೆಟ್ ಮಂಡಿಸುವ ಅಗತ್ಯ ಇದೆ. ಪ್ರಸ್ತುತ ಸಾವಿರಾರು ನೇಕಾರ ಕುಟುಂಬಗಳು ವಲಸೆ ಹೋಗುತ್ತಿವೆ ಎಂದರು.

ತರಬೇತಿ ಪಡೆದ 200 ಜನ ಮಹಿಳೆಯರು ಕೈಮಗ್ಗ ಒದಗಿಸುವಂತೆ ಆಯುಕ್ತರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಜಿ.ಟಿ. ಕುಮಾರ್,  ಜವಳಿ ಪ್ರವರ್ತನಾಧಿಕಾರಿ ಪಿ.ಕೆ. ಪರಪ್ಪ, ಬೋಜರಾಜ್ ಕಠಾರಿ, ಎಸ್. ಸಿದ್ದಲಿಂಗಮೂರ್ತಿ, ಕಂದಿಕೆರೆ ಸುರೇಶ್‌ಬಾಬು, ರಾಜಶೇಖರಪ್ಪ, ಸಿ. ಮಂಜಣ್ಣ, ಚಂದ್ರಣ್ಣ, ಆರ್. ಪ್ರಕಾಶ್, ಟಿ. ಸಿದ್ದಲಿಂಗಮೂರ್ತಿ, ಗುರುಸ್ವಾಮಿ, ಪಾತಲಿಂಗಪ್ಪ, ಟಿ. ಗಂಗಾಧರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.