ADVERTISEMENT

ಪೈಕಾ ಹಾಗೂ ದಸರಾ ಮತ್ತು ಮಹಿಳಾ ಕ್ರೀಡಾಕೂಟಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 6:25 IST
Last Updated 14 ಸೆಪ್ಟೆಂಬರ್ 2011, 6:25 IST

ಚಿತ್ರದುರ್ಗ: ಸರ್ಕಾರಿ ಆದೇಶದ ಪ್ರಕಾರ ಸ್ಥಳೀಯ ಸಂಸ್ಥೆಗಳು ಅಭಿವೃದ್ಧಿಯ ಅನುದಾನದಲ್ಲಿ ಶೇ.2ರಷ್ಟು ಮೊತ್ತವನ್ನು ಕ್ರೀಡಾ ಚಟುವಟಿಕೆಗಳಿಗೆ ಮೀಸಲಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ವಿವಿಧ ಕ್ರೀಡಾ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಪಂಚಾಯತ್ ಯುವ ಕ್ರೀಡಾ ಔರ್ ಖೇಲ್ ಅಭಿಯಾನ್ (ಪೈಕಾ) ಹಾಗೂ ದಸರಾ ಮತ್ತು ಮಹಿಳಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದ ಆದೇಶದ ಅನ್ವಯ ಕ್ರೀಡಾ ಚಟುವಟಿಕೆಗಳ ಬೆಳವಣಿಗೆಗೆ ಸ್ಥಳೀಯ ಸಂಸ್ಥೆಗಳು ಸ್ಪಂದಿಸಬೇಕು. ಆದರೆ, ಈ ಉದ್ದೇಶ ಈಡೇರುತ್ತಿಲ್ಲ.  ಕ್ರೀಡಾ ಚಟುವಟಿಕೆಗಳನ್ನು ಅಭಿವೃದ್ಧಿಗೊಳಿಸಲು ಹಾಗೂ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಪ್ರೊತ್ಸಾಹ ನೀಡಲು ಶೇ.2ರಷ್ಟು ಕಡ್ಡಾಯವಾಗಿ ಮೀಸಲಿಡಬೇಕು ಎಂದರು.

ಸರ್ಕಾರ `ಪೈಕಾ~ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ತಾಲ್ಲೂಕಿಗೆ ್ಙ 40 ಸಾವಿರ, ಎರಡನೇ ಸ್ಥಾನ ಪಡೆದ ತಾಲ್ಲೂಕಿಗೆ ರೂ 20 ಸಾವಿರ. ಮೂರನೇ ಬಹುಮಾನ ಪಡೆದ ತಾಲ್ಲೂಕಿಗೆ ್ಙ 8 ಸಾವಿರ ಘೋಷಿಸಿದೆ. ಇದು ಉತ್ತಮ ಬೆಳವಣಿಗೆ. ಇದರಿಂದ ಪ್ರೊತ್ಸಾಹ ಸಿಗುತ್ತದೆ ಎಂದರು.

ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಕ್ರೀಡಾಪಟುಗಳಿಗೆ ಉಚಿತ ಟ್ರ್ಯಾಕ್‌ಸೂಟ್ ಮತ್ತು ಕ್ರೀಡಾ ಸಲಕರಣೆಗಳನ್ನು ನೀಡುವ ಬಗ್ಗೆ ಐದು ವರ್ಷದ ಹಿಂದೆ ಜಿ.ಪಂ.ನಲ್ಲಿ ನಿರ್ಣಯಕೈಗೊಳ್ಳಲಾಗಿದೆ. ಈಗ ಅದನ್ನು ನಿಲ್ಲಿಸಲಾಗಿದೆ ಎಂದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಜಯರಾಮ್  ಮಾತನಾಡಿದರು.ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಮೊಹಮ್ಮದ್ ಮುಹೀಬುಲ್ಲಾ ಮಾತನಾಡಿ, ಗ್ರೂಪ್-ಎ ಪೈಕಾ ರಾಜ್ಯಮಟ್ಟದ ಕ್ರೀಡಾಕೂಟ ಚಿತ್ರದುರ್ಗದಲ್ಲೇ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ಜಿ.ಪಂ. ಸದಸ್ಯರಾದ ಟಿ. ರವಿಕುಮಾರ್, ಬಾಬುರೆಡ್ಡಿ, ಡಿ. ರಮೇಶ್, ಜಯಮ್ಮ ಬಾಲರಾಜು, ಮಾರಕ್ಕ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.