ADVERTISEMENT

ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 9:05 IST
Last Updated 4 ಅಕ್ಟೋಬರ್ 2011, 9:05 IST

ಮೊಳಕಾಲ್ಮುರು: ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡುವಂತೆ ಆಗ್ರಹಿಸಿ ಸೋಮವಾರ ಕೊಂಡ್ಲಹಳ್ಳಿ ಗ್ರಾಮಸ್ಥರು ಬೈಸಿಕಲ್ ರ‌್ಯಾಲಿ ನಡೆಸಿದರು.ಕೊಂಡ್ಲಹಳ್ಳಿಯಿಂದ ಕೋನಸಾಗರ, ನೇರ‌್ಲಹಳ್ಳಿ ಕ್ರಾಸ್, ಮರ‌್ಲಹಳ್ಳಿ ಮೂಲಕ ಮೊಳಕಾಲ್ಮುರಿಗೆ ಬೈಕ್‌ಗಳಲ್ಲಿ ಆಗಮಿಸಿದ ಗ್ರಾಮಸ್ಥರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ತಾಲ್ಲೂಕು ಕಚೇರಿ ಆವರಣಕ್ಕೆ ಆಗಮಿಸಿದರು.

3-4 ವರ್ಷಗಳಿಂದ ತಾಲ್ಲೂನಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂಭವಿಸಿ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಈ ವರ್ಷ ಮಳೆ ಕೊರತೆಯಿಂದಾಗಿ ಬೆಳೆ ಪೂರ್ಣವಾಗಿ ಕೈಕೊಟ್ಟಿದೆ. ಪರಿಣಾಮ ಜನ, ಜಾನುವಾರು ಸಂಕಷ್ಟಕ್ಕೀಡಾಗಿವೆ. ಆದ್ದರಿಂದ ಕೂಡಲೇ ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಬರಗಾಲ ಹಿನ್ನೆಲೆಯಲ್ಲಿ ಮುಂದಿನ ಮಳೆಗಾಲದವರೆಗೆ ಉದ್ಯೋಗ ಖಾತ್ರಿ ಯೋಜನೆ ಮತ್ತು ಬರಪರಿಹಾರ ಕಾಮಗಾರಿಗಳನ್ನು ಆರಂಭಿಸಿ ಜನರಿಗೆ ಕೆಲಸ ನೀಡುವ ಮೂಲಕ ಗುಳೆ ತಡೆಯಬೇಕು. ಕೊಂಡ್ಲಹಳ್ಳಿ ವ್ಯಾಪ್ತಿಯಲ್ಲಿ ಗೋಶಾಲೆ ಆರಂಭಿಸಬೇಕು ಎಂದು ಆಗ್ರಹಿಸಿದರು.

ಬಿ. ತಿಪ್ಪೇಸ್ವಾಮಿ, ಎಸ್.ಕೆ. ಗುರುಲಿಂಗಪ್ಪ, ಸದಾನಂದ, ಎಸ್.ಸಿ. ಪ್ರದೀಪ, ವಿರೂಪಾಕ್ಷಪ್ಪ, ಜಯಣ್ಣ, ಮಹಬೂಬ್‌ಖಾನ್, ಎಸ್.ಸಿ. ರುದ್ರಮುನಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಡಿ.ಇಡಿ; ಶೇ 95 ಫಲಿತಾಂಶ
ತಾಲ್ಲೂಕಿನ ಕೊಂಡ್ಲಹಳ್ಳಿಯ ರೇವಣ ಸಿದ್ದೇಶ್ವರ ಡಿ.ಇಡಿ ಕಾಲೇಜು 2010-11ನೇ ಸಾಲಿನಲ್ಲಿ ಶೇ. 95ರಷ್ಟು ಫಲಿತಾಂಶ ಪಡೆದುಕೊಂಡಿದೆ.ಒಟ್ಟು 46 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಈ ಪೈಕಿ 24 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಹಾಗೂ 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಫರಿನಾ ಕೌಸರ್  776 (ಶೇ.91.18) ಅಂಕ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ವಿದ್ಯಾಸಂಸ್ಥೆ ಅಧ್ಯಕ್ಷ ಆರ್. ಮಲ್ಲೇಶಪ್ಪ, ಕಾರ್ಯದರ್ಶಿ ಬಿ.ಎಸ್. ಬಸವರಾಜಪ್ಪ, ಪ್ರಾಂಶುಪಾಲ ಎಂ. ಗುರುಸ್ವಾಮಿ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.