ADVERTISEMENT

ಬೆಲೆ ಕುಸಿತ, ಲೋಡ್‌ಶೆಡ್ಡಿಂಗ್ ಕಪಿಮುಷ್ಠಿಯಲ್ಲಿ ನಲುಗಿದ ರೈತರು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 9:30 IST
Last Updated 13 ಅಕ್ಟೋಬರ್ 2011, 9:30 IST

ಚಿತ್ರದುರ್ಗ: ಸದಾ ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕುವ ಹೂವು ಬೆಳೆಗಾರರು ಈಗ ಬೆಲೆ ಕುಸಿತ ಮತ್ತು ವಿದ್ಯುತ್ ಲೋಡ್‌ಶೆಡ್ಡಿಂಗ್‌ಗೆ ನಲುಗಿದ್ದಾರೆ.ಬೆಲೆ ಕುಸಿತದಿಂದ ಹೂವು ಬೆಳೆಗಾರರು ತತ್ತರಿಸಿದ್ದಾರೆ. ದುಡಿದ ಶ್ರಮಕ್ಕೆ ಮತ್ತು ಹಾಕಿದ ಬಂಡವಾಳದ ಅರ್ಧದಷ್ಟು ಪ್ರತಿಫಲ ದೊರೆಯುತ್ತಿಲ್ಲ. ಈಗ ಹೂವು ಕಿತ್ತರೂ ನಷ್ಟ. ಇದರಿಂದಾಗಿ ಹೂವು ಕೀಳುವ ಬದಲಾಗಿ ಗಿಡಗಳನ್ನು ಕೀಳುವ ಹಂತಕ್ಕೆ ರೈತರು ತಲುಪಿದ್ದಾರೆ.

`ಈಗ ಒಂದು ಮಾರು ಹೂವಿಗೆ 75 ಪೈಸೆಯಿಂದ ರೂ 1 ದೊರೆಯುತ್ತಿದೆ. ಆದರೆ, ಒಂದು ಮಾರು ಹೂವು ಕಟ್ಟಲು ಒಂದು ರೂಪಾಯಿ ನೀಡಬೇಕು. ಜತೆಗೆ ಹೂವು ಕೀಳಲು ದಿನವೊಂದಕ್ಕೆ ಒಬ್ಬ ಕೂಲಿಕಾರನಿಗೆ ರೂ 125 ನೀಡಬೇಕು.

ಸಾಗಾಣಿಕೆ ವೆಚ್ಚ ಮತ್ತು ಮಾರುಕಟ್ಟೆ ಸುಂಕ ಹಾಗೂ ಕಮಿಷನ್ ಹೊರೆಯೂ ರೈತನ ಪಾಲಿಗೆ ಬರುತ್ತದೆ~ ಎಂದು ಹುಣಸೆಕಟ್ಟೆಯ ಕಾಂತರಾಜ್ ಮತ್ತು ಅನಂತಸ್ವಾಮಿ ಹೇಳುತ್ತಾರೆ.ವೈಜ್ಞಾನಿಕ ಬೆಲೆ ಸಿಗುವವರೆಗೂ ಹೂವು ಬೆಳೆಗಾರರ ಗೋಳು ತಪ್ಪುವುದಿಲ್ಲ ಎಂದು ರೈತರು ಹೇಳುತ್ತಾರೆ.
 
ಬೆಲೆ ಕುಸಿತದ ನಡುವೆ ಈಗ ಲೋಡ್‌ಶೆಡ್ಡಿಂಗ್ ಸಹ ಆರಂಭವಾಗಿರುವುದರಿಂದ ಗಿಡಗಳು ಒಣಗುತ್ತಿವೆ. ಇದರಿಂದಾಗಿ ಯಾವುದೇ ಪ್ರಯೋಜನವಿಲ್ಲ ಎಂದು ಮನಗಂಡಿರುವ ರೈತರು ಹೂವು ಗಿಡಗಳನ್ನು ಕಿತ್ತು ಪರ್ಯಾಯ ಬೆಳೆ ಬೆಳೆಯಲು ಚಿಂತನೆ ನಡೆಸಿದ್ದಾರೆ.

ಹುಣಸೆಕಟ್ಟೆ ಗ್ರಾಮದಲ್ಲಿ ಅಂದಾಜು 1,200 ಎಕರೆ ಪ್ರದೇಶದಲ್ಲಿ ಹೂವು ಬೆಳೆಯಲಾಗುತ್ತದೆ. ಬಹುತೇಕ ಎಲ್ಲರೂ ಹೂವು ಬೆಳೆಯುತ್ತಾರೆ. ಕೊಳವೆಬಾವಿಗಳ ಮೂಲಕವೇ ಗಿಡಗಳಿಗೆ ನೀರು ಹರಿಸಲಾಗುತ್ತದೆ. ಆದರೆ, ಲೋಡ್‌ಶೆಡ್ಡಿಂಗ್‌ನಿಂದ ಯಾವ ಸಮಯದಲ್ಲಿ ವಿದ್ಯುತ್ ಇರುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ ಎನ್ನುವುದು ರೈತರ ಅಳಲು.

ತಲತಲಾಂತರಗಳಿಂದ ಬೆಳೆದು ಬಂದಿರುವ ಹೂವು ಬೆಳೆಗೆ ಈಗ ಕೊಡಲಿಪೆಟ್ಟು ಹಾಕುವ ಸ್ಥಿತಿಗೆ ಬಂದಿದ್ದಾರೆ ಎನ್ನುವುದು ರೈತರ ಗೋಳು.

ನಿಡುಮಾಮಿಡಿ ಸ್ವಾಮೀಜಿ ಹೇಳಿಕೆಗೆ ಖಂಡನೆ
ಹಿರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರಿಗೆ ಮರಣೋತ್ತರವಾಗಿ ಜ್ಞಾನಪೀಠ ಪ್ರಶಸ್ತಿ ಸಿಗಲಿ ಎಂದು ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ನೀಡಿರುವ ಹೇಳಿಕೆಯನ್ನು ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷ ಎನ್.ಇ. ನಾಗರಾಜ್ ಪ್ರಕಟಣೆಯಲ್ಲಿ ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.