ADVERTISEMENT

ಮರುಪರೀಕ್ಷೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 5:48 IST
Last Updated 12 ಏಪ್ರಿಲ್ 2013, 5:48 IST

ಚಿತ್ರದುರ್ಗ: ಎಸ್ಸೆಸ್ಸೆಲ್ಸಿಯ ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆಯಲ್ಲಿ ಪಠ್ಯ ಹೊರತುಪಡಿಸಿ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ದೂರಿ ಕೆಲ ವಿದ್ಯಾರ್ಥಿಗಳು ಹಾಗೂ ಪೋಷಕರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ವಿಜ್ಞಾನ ವಿಷಯದ ಮರು ಪರೀಕ್ಷೆ ಮಾಡಬೇಕು ಅಥವಾ ಕನಿಷ್ಠ 25 ಅಂಕಗಳನ್ನು ಹೆಚ್ಚುವರಿಯಾಗಿ ನೀಡಬೇಕು ಎಂದು ಆಗ್ರಹಿಸಿದರು.
ಪಠ್ಯ ಹೊರತುಪಡಿಸಿ ಪ್ರಶ್ನೆಗಳನ್ನು ಕೇಳಿರುವುದರಿಂದ ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಏ. 3ರಂದು ನಡೆದ ವಿಜ್ಞಾನ ವಿಷಯದಲ್ಲಿ ಅತ್ಯಂತ ಕ್ಲಿಷ್ಟ ಪ್ರಶ್ನೆಗಳನ್ನು ಕೇಳಿದ್ದಲ್ಲದೆ ವಿಷಯಕ್ಕೆ ಸಂಬಂಧಿಸಿರಿದ ಸಾಕಷ್ಟು ಪ್ರಶ್ನೆಗಳನ್ನು ಕೇಳಿ ಮಕ್ಕಳ ಆತ್ಮವಿಶ್ವಾಸವನ್ನೇ ಕುಗ್ಗಿಸಲಾಗಿದೆ. ಪ್ರಶ್ನೆಗಳು ಕಠಿಣವಾಗಿದ್ದರೂ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ನೇರ ಪ್ರಶ್ನೆ ಕೇಳಬೇಕಿತ್ತು. ಅಲ್ಲದೆ ಪಠ್ಯದಲ್ಲಿ ಇಲ್ಲದೇ ಇರುವ ವಿಜ್ಞಾನ ವಿಷಯದ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದರಿಂದ ಸಾಕಷ್ಟು ಮಕ್ಕಳಿಗೆ ತೊಂದರೆಯಾಗಿದೆ ಎಂದು ನಗರದ ಜ್ಞಾನ ಭಾರತಿ, ವಾಸವಿ, ಪಾರ್ಶ್ವನಾಥ, ಬರಗೇರಮ್ಮ ಪ್ರೌಢಶಾಲೆ ಸೇರಿದಂತೆ ಇನ್ನಿತರ ಶಾಲೆ ವಿದ್ಯಾರ್ಥಿಗಳು ಆಕ್ಷೇಪಿಸಿದರು.

ಏ. 10ರವರೆಗೂ ಪರೀಕ್ಷೆ ನಡೆಯುತ್ತಿದ್ದ ಕಾರಣ ಪ್ರತಿಭಟನೆ ವ್ಯಕ್ತಪಡಿಸಿರಲಿಲ್ಕಲ. ಪರೀಕ್ಷೆ ನಡೆಯುವ ಹಂತದಲ್ಲಿ ಹೋರಾಟ ಮಾಡಿದರೆ ಮುಂದಿನ ವಿಷಯಗಳಿಗೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಪರೀಕ್ಷೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಇದರ ಜೊತೆಯಲ್ಲಿ ಗಣಿತ ವಿಷಯವು ಕ್ಲಿಷ್ಟಕರವಾಗಿತ್ತು. ಆದರೆ, ಪ್ರಶ್ನೆಗಳು ಪಠ್ಯಕ್ಕೆ ಸೀಮಿತವಾಗಿದ್ದ ಕಾರಣ ನಾವು ಈ ಬಗ್ಗೆ ಆಕ್ಷೇಪಣೆ ಮಾಡಿರಲಿಲ್ಲ ಎಂದು ತಿಳಿಸಿದರು.

ಪೋಷಕರಾದ ಪುಷ್ಪಲತಾ, ಜಾಗೃತಿ, ಟಿ. ಹನುಮಂತಪ್ಪ, ಜಯಣ್ಣ, ಮಂಜುನಾಥ್, ಭಾರತಿ, ಸುನಿತಾ, ಸುದರ್ಶನ್, ವಿದ್ಯಾರ್ಥಿಗಳಾದ ಪ್ರಿಯಾಂಕ, ನಾಗಶ್ರೀ ಪ್ರಿಯಾ, ಅರ್ಪಿತಾ, ಪ್ರದೀಪ್, ನಾಗೇಶ್, ರಾಘವೇಂದ್ರ, ನದೀಮ್, ಮನೋಹರ್, ರಾಕೇಶ್, ಸಾದತ್, ನಿರಂಜನಮೂರ್ತಿ, ನಾಗಾರ್ಜುನ್, ಪ್ರೀತಮ್, ಮನು, ಪ್ರಮೋದ್, ಜೀಶಾಂತ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT