ADVERTISEMENT

ಮಳೆಗೆ ಭರ್ತಿಯಾದ ಮಲ್ಲಾಪುರ ಕೆರೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 11:22 IST
Last Updated 15 ಜೂನ್ 2018, 11:22 IST

ಚಿತ್ರದುರ್ಗ: ನಗರದಲ್ಲಿ ಈಚೆಗೆ ನಿರಂತರವಾಗಿ ಸುರಿದ ಮಳೆಗೆ ಮಲ್ಲಾಪುರ ಕೆರೆ ಭರ್ತಿಯಾಗಿದ್ದು, ತೂಬಿನ ಮೂಲಕ ಗೋನೂರು ಕೆರೆಗೆ ನೀರು ಹರಿಯುತ್ತಿದೆ.

ಹಿಂಗಾರು ಮಳೆಗೆ ಕೋಡಿ ಬಿದ್ದಿದ್ದ ಕೆರೆ, ಬೇಸಿಗೆಯಲ್ಲಿ ನೀರಿನ ಮಟ್ಟ ಅರ್ಧಕ್ಕೆ ಕುಸಿದಿತ್ತು. ಒಂದೂವರೆ ತಿಂಗಳಿಂದ ಸತತವಾಗಿ ಸುರಿದ ಪೂರ್ವ ಮುಂಗಾರು ಮಳೆಗೆ ಕೆರೆಗೆ ಜೀವಕಳೆ ಬಂದಿದೆ.

ನಗರದ ಹೊರವಲಯದ ಬಡಾವಣೆಗೆ ಹೊಂದಿಕೊಂಡಂತಿರುವ ಕೆರೆಯಲ್ಲಿ ಕೋಡಿಯವರೆಗೂ ನೀರು ಸಂಗ್ರಹವಾಗಿದೆ. ರಾಷ್ಟ್ರೀಯ ಹೆದ್ದಾರಿ–13ರ ಪಕ್ಕದಲ್ಲಿರುವ ಕೆರೆ ಏರಿಗೆ ನೀರಿನ ಅಲೆಗಳು ಅಪ್ಪಳಿಸುತ್ತಿವೆ.

ADVERTISEMENT

ಮಲ್ಲಾಪುರ ಕೆರೆ ತುಂಬಿ ಕೋಡಿ ಹರಿದರೆ, ಗೋನೂರು, ದ್ಯಾಮೇನಹಳ್ಳಿ ಕೆರೆ ಸೇರುತ್ತದೆ. ಸಾಣಿಕೆರೆ, ರಾಣಿಕೆರೆ ದಾಟಿ ಆಂಧ್ರಪ್ರದೇಶದ ಜಿನಗಿಹಳ್ಳ ಸೇರುತ್ತದೆ. ಕೆರೆ ತುಂಬಿರುವುದರಿಂದ ಸುತ್ತಲಿನ ಗ್ರಾಮಗಳ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ.

ಜೋಗಿಮಟ್ಟಿ, ಚಂದ್ರವಳ್ಳಿ ಸೇರಿದಂತೆ ನಗರದಲ್ಲಿ ಬಿದ್ದ ಮಳೆಯ ನೀರು ಇಳಿಮುಖವಾಗಿ ಹರಿದು ಮಲ್ಲಾಪುರ ಕೆರೆ ಸೇರುತ್ತದೆ. ಮಳೆನೀರಿ ನೊಂದಿಗೆ ಚರಂಡಿ ಕೊಳಚೆಯೂ ಸೇರಿ ನೀರು ಹಸಿರು ಬಣ್ಣಕ್ಕೆ ತಿರುಗಿದೆ.

ಕೆರೆಯ ನೀರಿನಲ್ಲಿ ತ್ಯಾಜ್ಯ ತೇಲುತ್ತಿದೆ. ಕಸ–ಕಡ್ಡಿ, ಪ್ಲಾಸ್ಟಿಕ್‌, ನೀರಿನ ಬಾಟಲಿ, ವೈದ್ಯಕೀಯ ತ್ಯಾಜ್ಯ ಕೂಡ ಕಣ್ಣಿಗೆ ರಾಚುತ್ತಿದೆ. ರಭಸವಾಗಿ ಬೀಸುವ ಗಾಳಿಗೆ ಕಸ ಕೆರೆ ಏರಿಯ ಸಮೀಪಕ್ಕೆ ಸಂಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.