ಚಳ್ಳಕೆರೆ: ಮಾದರಿ ಹೈನುಗಾರಿಕೆ ಮಾಡುವಲ್ಲಿ ಹಸಿರು ಹುಲ್ಲು ಹಾಗೂ ಅಜೋಲಾ ತೊಟ್ಟಿ ಅತ್ಯವಶ್ಯಕ ಎಂದು ತಾಲ್ಲೂಕು ಹೈನುಗಾರಿಕೆ ಅಧಿಕಾರಿ ಕೊಟ್ರೇಶ್ ರೈತರಿಗೆ ಸಲಹೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೋಮವಾರ ಕೊರ್ಲಕುಂಟೆ ಗ್ರಾಮದ ಸುಜಾತಾ ಎಂಬುವರ ಜಮೀನಿನಲ್ಲಿ ಅಜೋಲಾ ತೊಟ್ಟಿ ರಚನೆಯ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿ 50 ಮಂದಿ ರೈತರಿಗೆ ಮಾಹಿತಿ ನೀಡಿ ಅವರು ಮಾತನಾಡಿದರು.
ಬಹಳ ಸುಲಭವಾಗಿ ಕೃಷಿಕರು ಈ ತೊಟ್ಟಿ ರಚನೆ ಮಾಡಬಹುದು 7 ಅಡಿ ಉದ್ದ 3 ಅಡಿ ಅಗಲ 1ಅಡಿ ಆಳದಲ್ಲಿ ಪ್ಲಾಸ್ಟಿಕ್ ಪೇಪರ್ ಬಳಸಿ ಮಣ್ಣು, ಕೊಟ್ಟಿಗೆ ಗೊಬ್ಬರ ಬಳಸಿ ಅಜೋಲಾ ತೊಟ್ಟಿ ರಚನೆ ಮಾಡಬೇಕು ಎಂದು ವಿವರಿಸಿದರು.
ದಿನಕ್ಕೆ ಅರ್ಧ ಕೆ.ಜಿ.ಯಂತೆ ದನಗಳಿಗೆ ಅಜೋಲಾ ಹಾಕಿದಲ್ಲಿ ಹೆಚ್ಚು ಹಾಲು ಉತ್ಪಾದನೆ ಆಗುತ್ತದೆ. ಮಾರುಕಟ್ಟೆಯಲ್ಲಿ ತರುವ ಪಶು ಆಹಾರದ ಖರ್ಚನ್ನು ಉಳಿಸಬಹುದು ರಾಸುಗಳು ಅಲ್ಲದೇ ಇದನ್ನು ಕುರಿ, ಕೋಳಿಗಳಿಗೆ ಉತ್ತಮ ಆಹಾರವಾಗಿ ಬಳಸಬಹುದು ಎಂದು ಅವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಂಜುನಾಥ ಮತ್ತು ಸೇವಾ ಪ್ರತಿನಿಧಿ ಶಾಂತಾ ಹಾಗೂ ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.