ADVERTISEMENT

‘ವರ್ಷಗಳು ಉರುಳಿದರೂ ಅಳಿಯದ ತಾರತಮ್ಯ’

‘ಮಹಿಳಾ ಕವಿಗೋಷ್ಠಿ’ಯಲ್ಲಿ ಪ್ರೊ. ಪಿ.ಯಶೋದಾ ರಾಜಶೇಖರಪ್ಪ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 6:41 IST
Last Updated 10 ಮಾರ್ಚ್ 2018, 6:41 IST
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಬುಧವಾರ ಜಿಲ್ಲಾ ಪಂಚಾಯ್ತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಮಹಿಳಾ ಕವಿಗೋಷ್ಠಿ’ಯಲ್ಲಿ ಕವಯತ್ರಿ ಜ್ಯೋತಿಲಕ್ಷ್ಮಿ ಸಿರಿಗೆರೆ ಅವರು ಕವಿತೆ ವಾಚಿಸಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಬುಧವಾರ ಜಿಲ್ಲಾ ಪಂಚಾಯ್ತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಮಹಿಳಾ ಕವಿಗೋಷ್ಠಿ’ಯಲ್ಲಿ ಕವಯತ್ರಿ ಜ್ಯೋತಿಲಕ್ಷ್ಮಿ ಸಿರಿಗೆರೆ ಅವರು ಕವಿತೆ ವಾಚಿಸಿದರು.   

ಚಿತ್ರದುರ್ಗ: ನೂರಕ್ಕೂ ಹೆಚ್ಚು ವರ್ಷಗಳಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದರೂ ಮಹಿಳೆಯರ ಬಗೆಗಿನ ಪೂರ್ವಾಗ್ರಹ ಕಡಿಮೆಯಾಗಿಲ್ಲ. ಸಾಮಾಜಿಕ ತಾತರಮ್ಯ ನಿಂತಿಲ್ಲ ಎಂದು ಪ್ರೊ.ಪಿ.ಯಶೋದಾ ರಾಜಶೇಖರಪ್ಪ ವಿಷಾದಿಸಿದರು.

ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಗುರುವಾರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಮಹಿಳಾ ಕವಿಗೋಷ್ಠಿ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳೆಯರಿಗೆ ಪರಿಪೂರ್ಣ ಸ್ವಾತಂತ್ರ್ಯ ಸಿಗಬೇಕು. ಆಗಷ್ಟೇ ಸಮಾಜದಲ್ಲಿ ಆಕೆ ಮತ್ತಷ್ಟು ಬೆಳೆಯಲು ಸಾಧ್ಯವಾಗುತ್ತದೆ. ಹಾಗೆಯೇ, ಮಹಿಳೆ ಎಂಬ ಪರಿಕಲ್ಪನೆಗೂ ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಶಿಷ್ಟ ಕಾವ್ಯ ಸಾಹಿತ್ಯದಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಪರಂಪರೆ ಇದೆ. ಅಕ್ಕಮಹಾದೇವಿ, ಸಂಚಿ ಹೊನ್ನಮ್ಮ ಅವರಂಥವರು ದೊಡ್ಡ ಕವಯಿತ್ರಿಯರು. ಆದರೆ, ಅವರ ಕಾವ್ಯಗಳ ಮೇಲೆ ಹೆಚ್ಚಾಗಿ ಬೆಳಕು ಹರಿಯಲಿಲ್ಲ ಎಂದು ವಿಷಾದಿಸಿದರು.

ಜನಪದ ಸಾಹಿತ್ಯದಲ್ಲಿ ಮಹಿಳೆಯರು ಮೌಲ್ಯಯುತವಾದ ಮೌಖಿಕ ಕಾವ್ಯ ರಚಿಸಿದ್ದರು. ಮೂರು ಸಾಲುಗಳ ಆ ಜನಪದ ಕಾವ್ಯದಲ್ಲಿ ಬದುಕಿನ ಎಲ್ಲಾ ಮುಖಗಳನ್ನು ಅಭಿವ್ಯಕ್ತಗೊಳಿಸುತ್ತಿದ್ದರು ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಹವ್ಯಾಸಿ ಬರಹಗಾರ್ತಿ ರಮಾ ಎಸ್. ಅರಕಲಗೂಡು ಅವರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳಾ ಸಾಧಕರ ಬಗ್ಗೆ ಮಾಹಿತಿ ಹಂಚಿಕಂಡರು. ಜ್ಯೋತಿ ಲಕ್ಷ್ಮಿ ಸಿರಿಗೆರೆ ಅವರು ‘ಹಿಂದಿನ ಮಹಿಳೆ.. ಆಧುನಿಕ ಮಹಿಳೆ’ ಕುರಿತ ಕವನ ವಾಚನ ಮಾಡಿದರು. ಸಾಹಿತಿ ಷರೀಫಾ ಬಿ, ಸಿ.ಬಿ.ಶೈಲಾ, ಎನ್.ಮಮತಾ, ಡಾ.ಚಾಂದಿನಿ, ಶಿವಗಂಗ ಚಿತ್ತಯ್ಯ, ಲಲಿತಾ ಕೃಷ್ಣಮೂರ್ತಿ, ನಿರ್ಮಲಾ ಮರಡಿಹಳ್ಳಿ, ಕೆ.ಅಕ್ಷತಾ, ಬಿ.ಎಂ.ನಾಗರತ್ನ, ನಿರ್ಮಲಾ ಮಂಜುನಾಥ್, ಜ್ಯೋತಿ ಲಕ್ಷ್ಮಿ ಸಿರಿಗೆರೆ ಅವರು ಮಹಿಳಾ ಸಂವೇದನೆ ವಿಷಯಗಳನ್ನೊಳಗೊಂಡ ಕವಿತೆ ವಾಚಿಸಿದರು.

ಪ್ರತಿಯೊಂದು ಕವಿತೆಯಲ್ಲೂ ಮಹಿಳೆಯ ನೋವು–ನಲಿವುಗಳ ಹೂರಣವಿತ್ತು.

ಪ್ರಾಸ್ತಾವಿಕವಾಗಿ ಮಾತನಾಡಿದ ಚಂದ್ರಿಕಾ ಸುರೇಶ್ ಕಾವ್ಯ ಪ್ರಕಾರಗಳ ಮಹತ್ವವನ್ನು ವಿವರಿಸಿದರು. ಪುಷ್ಪಾ ಸ್ವಾಗತಿಸಿದರು. ಮಮತಾ ತಿಪ್ಪಣ್ಣ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.