ADVERTISEMENT

ವಾಲಿದ ಗರುಡಸ್ತಂಭದ ವಿಗ್ರಹ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2012, 5:50 IST
Last Updated 27 ಏಪ್ರಿಲ್ 2012, 5:50 IST

ಹಿರಿಯೂರು: ಉಪಗ್ರಹ ಆಧರಿಸಿದ ಹವಾಮಾನ ಮುನ್ಸೂಚನೆಯನ್ನು ಎಷ್ಟು ಜನ ಕೇಳುತ್ತಾರೆ? ಈ ಬಗ್ಗೆ ಲೆಕ್ಕ ಸಿಗದು. ಆದರೆ, ತಾಲ್ಲೂಕಿನ ಬಹುತೇಕ ರೈತರು ಆಯಾ ವರ್ಷದ ಮಳೆ-ಬೆಳೆ ಬಗ್ಗೆ ಅಂಬಲಗೆರೆಯ ರಂಗನಾಥಸ್ವಾಮಿ ದೇಗುಲದ ಮುಂದಿರುವ ಗರುಡಸ್ತಂಭದ ಮೇಲಿರುವ ಗರುಡ ವಿಗ್ರಹದ ಚಲನೆ ಆಧರಿಸಿ ತೀರ್ಮಾನಕ್ಕೆ ಬರುತ್ತಾರೆ.

ಜನರ ನಂಬಿಕೆಯ ಪ್ರಕಾರ, ಗರುಡ ವಿಗ್ರಹ ಹಿಂದಕ್ಕೆ ವಾಲಿದರೆ ಮಳೆ ಬಾರದು. ನೇರವಾಗಿ ನಿಂತರೆ ಉತ್ತಮ ಮಳೆ. ಮುಂದಕ್ಕೆ ವಾಲಿದರೆ ಭೀಕರ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಪ್ರತೀತಿ ಇದೆ.  ಮಂಗಳವಾರ ಸಂಜೆಯಿಂದ ಗರುಡ ವಿಗ್ರಹ ಭೂಮಿ ಕಡೆಗೆ ವಾಲಿದ್ದು, ಎರಡು ದಿನ ಕಳೆದರೂ ವಿಗ್ರಹ ನೇರವಾಗದಿರುವ ಕಾರಣ ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ವಿಗ್ರಹ ಭೂಮಿ ಕಡೆಗೆ ವಾಲಿದಾಗ ಯಾವುದೋ ಅಪಾಯ ಸಂಭವಿಸುತ್ತದೆ ಎನ್ನುವುದಕ್ಕೆ ಸುನಾಮಿ, ಇಂದಿರಾಗಾಂಧಿ, ರಾಜೀವ್‌ಗಾಂಧಿ ಹತ್ಯೆಯಾದ ಉದಾಹರಣೆ ನೀಡುವ ಗ್ರಾಮದ ಹಿರಿಯರು, ಹಿಂದೆಲ್ಲ ಭೂಮಿ ಕಡೆ ವಾಲಿದ್ದ ವಿಗ್ರಹ ಮರುದಿನದ ವೇಳೆಗೆ ನೇರ ನಿಲ್ಲುತ್ತಿತ್ತು. ಆದರೆ, ಈ ಬಾರಿ ವಿಗ್ರಹದ ಚಲನೆ ಬದಲಾಗದಿರುವುದು ಯಾವುದೋ ದೊಡ್ಡ ಅನಾಹುತದ ಸೂಚನೆ ಎಂದು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

ಸುಮಾರು 45 ಅಡಿ ಎತ್ತರವಿರುವ ಕಲ್ಲಿನ ಸ್ತಂಭದ ಮೇಲೆ ಗರುಡ ವಿಗ್ರಹ ಕೆತ್ತಲಾಗಿದ್ದು, ಕೆಳಗಿನಿಂದ ವೀಕ್ಷಿಸಿದರೆ ಸ್ತಂಭದ ಮೇಲೆ ಗರುಡ ವಿಗ್ರಹ ಕೂರಿಸಿದಂತೆ ಕಾಣುತ್ತದೆ. ಈ ವಿಗ್ರಹದ ಚಲನೆ ಆಧರಿಸಿ ಮಳೆಯ ಪ್ರಮಾಣ ಊಹಿಸಲಾಗುತ್ತದೆ. ಗರುಡ ವಿಗ್ರಹ ಹೇಗೆ ಚಲಿಸುತ್ತದೆ ಎಂಬ ಬಗ್ಗೆ ಊರಿನವರು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಇದೆಲ್ಲಾ ದೇವರ ಅನುಗ್ರಹದಿಂದಲೇ ನಡೆಯುತ್ತದೆ ಎಂಬ ಭಾವನೆ ಇಲ್ಲಿನವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.