ಹೊಸದುರ್ಗ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬೆಲಗೂರಿನ ಮಾರುತಿ ಪೀಠ ಮಹಾಸಂಸ್ಥಾನದ ವೀರಪ್ರತಾಪ ಆಂಜನೇಯಸ್ವಾಮಿ ಮಹಾಬ್ರಹ್ಮಥೋತ್ಸವ ಶುಕ್ರವಾರ ಅದ್ಧೂರಿಯಾಗಿ ನಡೆಯಿತು.
ರಥೋತ್ಸವದ ಅಂಗವಾಗಿ ಗ್ರಾಮದ ರಾಜಬೀದಿಯಲ್ಲಿ ಪಾದುಕೆಗಳ ಅಡ್ಡಪಲ್ಲಕ್ಕಿ ಉತ್ಸವ, ಮಹಾಗಣಪತಿ ಪೂಜೆ, ಗಂಗಾಪೂಜೆ, ಸ್ವಸ್ತಿವಾಚನ, ದೇವಾನಂದಿ, ಕೌತುಕ ಬಂಧನ, ಕಳಶ ಸ್ಥಾಪನೆ, ವಾಲ್ಮೀಕಿ ರಾಮಾಯಣ ಪಠನೆ, ನವಗ್ರಹ ಜಪ, ವೇದ ಪಾರಾಯಣ, ಸಾಯಂಕಾಲೋತ್ಸವ, ಹೋಮ ಹವನ, ಬಲಿ ಪ್ರದಾನ, ಲಕ್ಷ್ಮೀಕಲ್ಯಾಣೋತ್ಸವ, ಸೀತಾಕಲ್ಯಾಣೋತ್ಸವ ಜರುಗಿದವು.
ಅಭಿಜಿತ್ ಮುಹೂರ್ತದಲ್ಲಿ ಬಗೆ ಬಗೆಯ ಹೂ ಮಾಲೆ, ಬಣ್ಣ ಬಣ್ಣದ ಬಟ್ಟೆಗಳಿಂದ ಶೃಂಗಾರಗೊಂಡಿದ್ದ ಎರಡು ರಥಗಳಿಗೆ ವೀರಪ್ರತಾಪ ಆಂಜನೇಯ ಹಾಗೂ ಲಕ್ಷ್ಮೀ ನಾರಾಯಣಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ ರಥಕ್ಕೆ ಹಿಡುಗಾಯಿ ಸೇವೆ, ಬಲಿಅನ್ನ ಪೂಜೆ, ಮಣೇವು ಸೇವೆ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮ ನಡೆದ ಬಳಿಕ ಭಕ್ತರು ತೇರನ್ನು ಎಳೆದರು. ರಥಕ್ಕೆ ಬಾಳೆ ಹಣ್ಣು ಎಸೆದು ತಮ್ಮ ಇಷ್ಟಾರ್ಥಗಳು ಈಡೇರಲೆಂದು ಭಕ್ತರು ಪ್ರಾರ್ಥಿಸಿದರು.
ಬಿಂದುಮಾಧವ ಶರ್ಮಾ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶಾಸಕ ಬಿ.ಜಿ.ಗೋವಿಂದಪ್ಪ, ಟಿಎಪಿಎಂಸಿ ಅಧ್ಯಕ್ಷ ಎಚ್.ಬಿ.ಮಂಜುನಾಥ್, ತಾಲ್ಲೂಕು ಪಂಚಾಯ್ತಿ ಸದಸ್ಯ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಇಸ್ಮಾಯಿಲ್, ರಾಜಣ್ಣ, ಶೀಲವಂತ, ಭಾವನಮೂರ್ತಿ ಭಾಗವಹಿಸಿದ್ದರು.
ಡಿ.3ರಂದು ದತ್ತ ಜಯಂತಿ, ವಿರಾಟ್ ದತ್ತಾತ್ರೆಯರ ಪೂಜೆ, ಸಾಧುಪೂಜೆ, ಹೆಬ್ಬಳ್ಳಿಯ ದತ್ತಾವಧೂತರಿಗೆ ನಾಮ ಸಾಮ್ರಾಜ್ಯ ಪಟ್ಟಾಭಿಷೇಕ, ಕ್ಷೀರಾಭಿಷೇಕ ಪೂಜಾ ಕಾರ್ಯಕ್ರಮ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.