ADVERTISEMENT

ವೈಭವದ ತಿಪ್ಪೇರುದ್ರಸ್ವಾಮಿ ಮರಿಪರಿಷೆ

ನಾಯಕನಹಟ್ಟಿ; ಗುರುತಿಪ್ಪೇರುದ್ರಸ್ವಾಮಿ ಜಾತ್ರೆಗೆ ವಿಧ್ಯುಕ್ತ ತೆರೆ; ಗಮನಸೆಳೆದ ಸಿಡಿಮದ್ದಿನ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 8:41 IST
Last Updated 2 ಏಪ್ರಿಲ್ 2013, 8:41 IST

ನಾಯಕನಹಟ್ಟಿ: ಇಲ್ಲಿನ ಶ್ರೀಗುರು ತಿಪ್ಪೇರುದ್ರಸ್ವಾಮಿ ಮರಿಪರಿಷೆ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ಜರುಗುವುದರೊಂದಿಗೆ ಹದಿನೈದು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ತೆರೆ ಬಿದ್ದಿತು.

ಸೋಮವಾರ ಬೆಳಿಗ್ಗೆಯಿಂದಲೇ, ದೊಡ್ಡರಥೋತ್ಸವಕ್ಕೆ ಬರಲಾಗದ ಸಾವಿರಾರು ಭಕ್ತರು ಬಂದು ಒಳಮಠ, ಹೊರಮಠಗಳಲ್ಲಿ ದರ್ಶನ ಪಡೆದರು. ದೊಡ್ಡ ರಥ, ಒಳಮಠ, ಹೊರಮಠಗಳ ಬಳಿ ಕೊಬ್ಬರಿಯನ್ನು ಸುಟ್ಟು ಭಕ್ತಿ ಸಮರ್ಪಿಸಿದರು.

ಸಂಜೆ ಒಳಮಠದಲ್ಲಿ ಹೂವಿನಿಂದ ಅಲಂಕರಿಸಿದ ಬೆಳ್ಳಿಪಲ್ಲಕ್ಕಿಯಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ನಂದಿಧ್ವಜ ಕುಣಿತ ಕರಡಿ ಮಜಲು, ಜಾನಪದ ವಾದ್ಯಗಳೊಂದಿಗೆ ಒಳಮಠದಿಂದ ಹೊರಮಠದ ವರೆಗೆ ತರಲಾಯಿತು.
ದಾರಿಯುದ್ದಕ್ಕೂ ಭಕ್ತರು ಸ್ವಾಮಿಗೆ ಹಣ್ಣು ಕಾಯಿ ಕೊಟ್ಟು ನಮಸ್ಕರಿಸುತ್ತ್ದ್ದಿದದ್ದು ಕಂಡುಬಂದಿತು.

ಪಲ್ಲಕ್ಕಿಯನ್ನು ಸ್ವಾಮಿಗಳು ಜೀವಂತ ಸಮಾಧಿ ಹೊಂದಿದ ಹೊರಮಠದ ಬಳಿ ತಂದು ಪೂಜೆ ಸಲ್ಲಿಸಿ ನಂತರ ಒಳಮಠಕ್ಕೆ ತರಲಾಯಿತು.
ಆಕರ್ಷಕ ಸಿಡಿಮದ್ದಿನ ಪ್ರದರ್ಶನ: ಬೆಳ್ಳಿಪಲ್ಲಕ್ಕಿ ಮಹೋತ್ಸವದಲ್ಲಿ ಆಕರ್ಷಕ ಸಿಡಿಮದ್ದಿನ ಪ್ರದರ್ಶನವನ್ನು ದೇವಸ್ಥಾನ ಸಮಿತಿ ಆಯೋಜಿಸಿತ್ತು. ಬಾನಂಗಳದಲ್ಲಿ ಸಿಡಿದ ಮದ್ದುಗಳ ಬಣ್ಣ ಭಕ್ತರನ್ನು ಆಕರ್ಷಿಸಿದವು.

ವೃದ್ಧಿಸಿದ ವ್ಯಾಪಾರ
ದೊಡ್ಡ ರಥೋತ್ಸವದ ನಡೆದ ನಂತರ ಪ್ರತೀ ದಿನ ಬಳೆ, ಮಕ್ಕಳ ಆಟಿಕೆಗಳ ವ್ಯಾಪಾರ ಜೋರಾಗಿಯೇ ನಡೆಯಿತು. ನಂತರ ಇಲ್ಲಿನ ಜೆಜೆಆರ್ ಕಾಲೇಜಿನ ಮುಂಭಾಗದಲ್ಲಿ ಹಾಕಿದ್ದ ವಿವಿಧ ಬಗೆಯ ಜೋಕಾಲಿಗಳ ಬಳಿ ಮಕ್ಕಳು, ಪೋಷಕರು, ಆಡಿ ನಲಿಯುತ್ತಿದ್ದರಿಂದ ಹಾವೇರಿ ಜಿಲ್ಲೆಯಿಂದ ಬಂದ ಜೋಕಾಲಿಗಳ ಮಾಲೀಕರಿಗೆ ವ್ಯಾಪಾರವು ಚೆನ್ನಾಗಿಯೇ ಆಯಿತು. ಜತೆಗೆ ಗ್ರಾಮದ ಮುಖ್ಯ ಬೀದಿಯಲ್ಲಿ ಹಾಕಲಾಗಿದ್ದ ಬಳೆ ಅಂಗಡಿಗಳಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.