ಚಿತ್ರದುರ್ಗ: ಪ್ರಸ್ತುತ ದಿನಗಳಲ್ಲಿ ಜನರು ಬಟ್ಟೆ ಹೊಲಿಸಿ ಹಾಕಿಕೊಳ್ಳುವ ಪ್ರವೃತ್ತಿ ಕಡಿಮೆಯಾಗುತ್ತಿದ್ದು, ಸಿದ್ಧ ಉಡುಪುಗಳಿಗೆ ಮೊರೆ ಹೋಗುತ್ತಿದ್ದಾರೆ ಎಂದು ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸುಬ್ಬರಾವ್ ಅಭಿಪ್ರಾಯಪಟ್ಟರು.
ಕೆಳಗೋಟೆಯ ಫಲೋಮಿನಾ ಶಾಲೆಯ ಆವರಣದಲ್ಲಿ ಈಚೆಗೆ ಭಾರತ ಸರ್ಕಾರದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಅಭಿವೃದ್ಧಿ ಸಂಸ್ಥೆ ಹಾಗೂ ಶೇಯಸ್ಸ್ ಮಹಿಳಾ ನಗರ ಮತ್ತು ಗ್ರಾಮೀಣ ಸೇವಾ ಸಂಘದ ಸಹಯೋಗದಲ್ಲಿ 6 ವಾರ ನಡೆದ ಸಿದ್ಧ ಉಡುಪು ತಯಾರಿಕೆ ತರಬೇತಿ ಸಮಾರೋಪದಲ್ಲಿ ಅವರು ಮಾತನಾಡಿದರು.
ಸಿದ್ಧ ಉಡುಪುಗಳ ಮೊರೆ ಹೊಗುತ್ತಿರುವುದರಿಂದ ಹೊಲಿಗೆ ತರಬೇತಿಗೆ ಬೇಡಿಕೆ ಹೆಚ್ಚಿದೆ. ಸಣ್ಣದಾಗಿ ಉದ್ಯಮ ಪ್ರಾರಂಭಿಸಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನಲ್ಲಿ ಸಿದ್ಧ ಉಡುಪುಗಳ ತಯಾರಿಕೆಯ ಘಟಕಗಳು ಹೆಚ್ಚಿನ ಪ್ರಮಾಣದಲ್ಲಿವೆ. ತರಬೇತಿ ಪಡೆದವರು ಉದ್ಯೋಗ ಪಡೆದು ಆರ್ಥಿಕವಾಗಿ ಸಬಲರಾಗಬಹುದು. ನಗರದಲ್ಲಿಯೂ ಕೆಲವೆಡೆಗಳಲ್ಲಿ ಸಿದ್ಧ ಉಡುಪುಗಳ ತಯಾರಿಕೆಯ ಘಟಕಗಳು ನಡೆಯುತ್ತಿವೆ ಎಂದರು.
ಗೋಪಿನಾಥ್ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಸಾಹಿತಿಗಳಾದ ಫಲೋಮಿನ್ ದಾಸ್, ವರ್ಷ ಅಸೋಸಿಯೇಷನ್ ಜಿ. ಸತ್ಯನಾರಾಯಣ, ಪ್ರೇಮಾ, ಸಂಸ್ಥೆ ಕಾರ್ಯದರ್ಶಿ ಡಿ.ಎಸ್. ಕೋಕಿಲಾ ಇತರರು ಹಾಜರಿದ್ದರು.
ಚಿತ್ರದುರ್ಗ ಸಿಸಿಗೆ ಜಯ
ಚಿತ್ರದುರ್ಗ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಶ್ರಯದಲ್ಲಿ ಗುರುವಾರ ನಗರದಲ್ಲಿ ನಡೆದ ಸಿನೀಯರ್ ಮೊದಲನೇ ಡಿವಿಜನ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ತುಮಕೂರಿನ ಭಾರತ್ ಕ್ರಿಕೆಟ್ ಕ್ಲಬ್ ಗುಬ್ಬಿ ತಂಡದ ವಿರುದ್ಧ ಚಿತ್ರದುರ್ಗ ಕ್ರಿಕೆಟ್ ಕ್ಲಬ್ ತಂಡ 6ರನ್ಗಳಿಂದ ಗೆಲುವು ಸಾಧಿಸಿದೆ.
ಟಾಸ್ಗೆದ್ದು ಬ್ಯಾಟಿಂಗ್ ಆರಂಭಿಸಿದ ಚಿತ್ರದುರ್ಗ ಕ್ರಿಕೆಟ್ ಕ್ಲಬ್ ತಂಡ 52 ಓವರ್ಗಳಲ್ಲಿ 185ರನ್ ಗಳಿಸಿತು. ನಂತರ ಬ್ಯಾಟಿಂಗ್ ಮಾಡಿದ ಗುಬ್ಬಿ ತಂಡ 179ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲು ಕಂಡಿತು ಎಂದು ಚಿತ್ರದುರ್ಗ ಕ್ರಿಕೆಟ್ ಕ್ಲಬ್ ಕಾರ್ಯದರ್ಶಿ ಎನ್. ಅಶೋಕ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.