ADVERTISEMENT

ಸುದ್ದಿಯಾಗದ ಗ್ರಾಮೀಣ ಸಂಕಷ್ಟ: ಓಎಲ್‌ಎನ್ ವಿಷಾದ

ಸಾಹಿತಿ ಜಿ.ಎಸ್.ಉಜ್ಜಿನಪ್ಪ ಸಾಹಿತ್ಯ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 9:59 IST
Last Updated 5 ಆಗಸ್ಟ್ 2013, 9:59 IST

ಚಿತ್ರದುರ್ಗ: ಅಪರಾಧ ಸುದ್ದಿಗಳು, ರಾಜಕಾರಣಿಗಳ ಭಾಷಣಗಳು, ರಾಜಕೀಯ ಕಿತ್ತಾಟಗಳೇ ದೃಶ್ಯ ಮಾಧ್ಯಮಗಳಿಗೆ ಪ್ರಮುಖ ಸುದ್ದಿಯಾಗುತ್ತಿದ್ದು, ಗ್ರಾಮೀಣ ಜನರ ಸಂಕಷ್ಟಗಳು ಅವರ ಕಣ್ಣಿಗೆ ಕಾಣುವುದೇ ಇಲ್ಲ ಎಂದು ಸಂಸ್ಕೃತಿ ಚಿಂತಕ ಪ್ರೊ.ಓ.ಎಲ್.ನಾಗಭೂಷಣ ಸ್ವಾಮಿ ವಿಷಾದಿಸಿದರು.

ನಗರದ ಪರ್ತಕರ್ತರ ಭವನದಲ್ಲಿ ಚಿತ್ರದುರ್ಗದ ಮಾಧ್ಯಮ ಗೆಳೆಯರು ಭಾನುವಾರ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಜಿ.ಎಸ್.ಉಜ್ಜಿನಪ್ಪನವರ ಸಾಹಿತ್ಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರಿಗೂ ಆಯಾಯ ಕ್ಷಣದಲ್ಲಿ ಕಾಡುವ ಸಮಸ್ಯೆಗಳೇ ದೊಡ್ಡ ಸವಾಲುಗಳೆಂಬಂತೆ ಚಿತ್ರಿಸಲಾಗುತ್ತಿದೆ. ಕುಗ್ರಾಮಗಳಲ್ಲಿ ಬದುಕುತ್ತಿರುವವರ ಜೀವನ ಚಿತ್ರಣ ಮಾಧ್ಯಮಗಳ ಒಳಗಣ್ಣಿಗೆ ಬೀಳದಿರುವುದು ವಿಪರ್ಯಾಸ ಎಂದರು.

ಪತ್ರಕರ್ತರು, ಶಿಕ್ಷಕರು ಸೇರಿದಂತೆ ಬಹುತೇಕ ಮುಖ್ಯವಾಹಿನಿ ಯಲ್ಲಿರುವವರು ವ್ಯಾಪ್ತಿ ಮೀರಿ ಉದ್ದಟನದಿಂದ ವರ್ತಿಸುತ್ತಾರೆ. ಆಸಕ್ತಿ ಇರುವ ಕ್ಷೇತ್ರಕ್ಕೆ ಇವರು ನ್ಯಾಯ ಒದಗಿಸುತ್ತಿಲ್ಲ ಎಂದು ಆರೋಪಿಸಿದರು.  ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಒಂದೊಂದು ಕಥೆ ಕಟ್ಟಿಕೊಳ್ಳದಿದ್ದರೆ ಜೀವನ ಶೂನ್ಯವೆನಿಸುತ್ತದೆ.

ಅಂಥ ಕಥೆಗಳನ್ನು ಉಜ್ಜಿನಪ್ಪನವರು ತಮ್ಮ ಸಾಹಿತ್ಯ ಕೃತಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
ಸಂಶೋಧಕ ಡಾ.ಬಿ.ರಾಜ ಶೇಖರಪ್ಪ  ಮಾತನಾಡಿ, ವೃತ್ತಿಯಲ್ಲಿ ಪತ್ರಕರ್ತರಾಗಿದ್ದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಿದವರಲ್ಲಿ ಬಿ.ವಿ.ವೈಕುಂಠ ರಾಜು, ಮರಡಿಹಳ್ಳಿ ಶ್ರಿಧರ್, ರಾಜಕಾರಣಿಯಾಗಿದ್ದು ಜಿಲ್ಲೆಯ ಜನತೆ ಜ್ಞಾಪಿಸಿಕೊಳ್ಳಬೇಕಾದ ಭೀಮಪ್ಪ ನಾಯಕ, ಕೆಂಚಪ್ಪ, ಎಸ್.ನಿಜಲಿಂಗಪ್ಪ ಇನ್ನೂ ಖ್ಯಾತ ನಾಮರ ಸಾಲಿಗೆ ಉಜ್ಜಿನಪ್ಪ ಸೇರುತ್ತಾರೆ ಎಂದು ತಿಳಿಸಿದರು.

ಜಾನಪದ ತಜ್ಞ ಡಾ.ಮೀರಾಸಾಬಿ ಹಳ್ಳಿ ಶಿವಣ್ಣ   ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೋಬಾನೆ ಸಿದ್ದವ್ವ ಮತ್ತು ಸಂಗಡಿಗರು ಸೋಬಾನೆ ಪದಗಳನ್ನು ಹಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪತ್ರಕರ್ತರಾದ ತಿಪ್ಪೇಸ್ವಾಮಿ ಸ್ವಾಗತಿಸಿದರು. ಅಹೋಬಳಪತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.