ಚಿತ್ರದುರ್ಗ: ಜಾಮೀನಿಗಾಗಿ ಲಂಚ ಹಗರಣದಲ್ಲಿ ಬಂಧಿತರಾಗಿರುವ ಶಾಸಕ ಸೋಮಶೇಖರ್ ರೆಡ್ಡಿ ಅವರನ್ನು ಕೆಎಂಎಎಫ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯ ಸಂಘಟನೆಯ ಎಸ್.ಆರ್. ಹಿರೇಮಠ ಒತ್ತಾಯಿಸಿದ್ದಾರೆ.
ಶಾಸಕ ಸೋಮಶೇಖರರೆಡ್ಡಿ ವಿರುದ್ಧ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಕ್ಷಣ ಕ್ರಮಕೈಗೊಳ್ಳಬೇಕು. ಸಾರ್ವಜನಿಕ ಜೀವನದಲ್ಲಿ ಭ್ರಷ್ಟರಿಗೆ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಈಗಾಗಲೇ ಆಂದೋಲನ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಜಾಮೀನಿಗಾಗಿ ಲಂಚ ನೀಡಿದ ಹಗರಣಕ್ಕೆ ಸಂಬಂಧಿಸಿದಂತೆ ಸೋಮಶೇಖರ್ ರೆಡ್ಡಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಕಂಪ್ಲಿ ಶಾಸಕ ಸುರೇಶ್ಕುಮಾರ್ ತಮ್ಮ ಮಾವ ಬಿ. ಶ್ರೀರಾಮುಲು ದೂರವಾಣಿಯಲ್ಲಿ ನೀಡಿದ ನಿರ್ದೇಶನದಂತೆ ಜಾಮೀನಿಗಾಗಿ ಲಂಚ ನೀಡಲಾಗಿದೆ ಎಂದು ಆಂಧ್ರಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಮುಂದೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಬಿಎಸ್ಆರ್ ಪಕ್ಷದ ಮುಖಂಡ ಶ್ರೀರಾಮುಲು ಸ್ಪಷ್ಟನೆ ನೀಡಬೇಕು. ಜಾಮೀನಿಗಾಗಿ ಅಪಾರ ಮೊತ್ತದ ಹಣ ನೀಡಲಾಗಿದೆ.
ಅದೇ ರೀತಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರೂ200 ಕೋಟಿ ಹಾಗೂ ಪ್ರತಿ ತಿಂಗಳು ರೂ10 ಕೋಟಿಯಂತೆ ಆರು ತಿಂಗಳು ಹಣ ನೀಡಿದ್ದೇವೆ ಎಂದು ಬಿ. ಶ್ರೀರಾಮುಲು ಹೇಳಿದ್ದಾರೆ. ಇದಕ್ಕೆಲ್ಲಾ ಹಣ ಎಲ್ಲಿಂದ ಬಂತು ಎನ್ನುವುದನ್ನು ಅವರು ಹೇಳುವರೇ ಎಂದು ಸವಾಲು ಹಾಕಿದರು.
ಪಾದಯಾತ್ರೆ ಸೋಗಿನಲ್ಲಿ...
ಅಕ್ರಮದಿಂದ ಸಂಪಾದಿಸಿದ ಹಣದಲ್ಲಿ ಚುನಾವಣಾ ಪ್ರಕ್ರಿಯೆಯನ್ನೇ ಹಾಳು ಮಾಡಿರುವ ಶ್ರೀರಾಮುಲು ಈಗ ಪಾದಯಾತ್ರೆಯ ಸೋಗು ಹಾಕಿಕೊಂಡು ಜನರನ್ನು ಭ್ರಷ್ಟರನ್ನಾಗಿಸಲು ಹೊರಟಿದ್ದಾರೆ ಎಂದು ಟೀಕಿಸಿದ ಅವರು ಇಂತಹ ಭ್ರಷ್ಟರು ರಾಜ್ಯದ ಭವಿಷ್ಯ ನಿರ್ಣಯಿಸಲು ಯೋಗ್ಯರೇ? ಎನ್ನುವುದನ್ನು ಜನ ನಿರ್ಧರಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಸರ್ಕಾರಿ ಜಮೀನು ಒತ್ತುವರಿಗೆ ಸಂಬಂಧಿಸಿದಂತೆ ಡಾ.ವಿ. ಬಾಲಸುಬ್ರಹ್ಮಣ್ಯಂ ನೇತೃತ್ವದ ಕಾರ್ಯಪಡೆ ಸಲ್ಲಿಸಿದ ವರದಿಯಲ್ಲಿ 11 ಲಕ್ಷ ಹೆಕ್ಟೇರ್ ಭೂಮಿ ಅತಿಕ್ರಮವಾಗಿದೆ. ಇದರ ಮೌಲ್ಯ ರೂ1.95 ಲಕ್ಷ ಕೋಟಿಗಳಾಗಿದ್ದು, ಇದನ್ನು ವಾಪಸ್ ಪಡೆಯಬೇಕು ಎಂದು ಹೇಳಿದೆ. ಇದು 2ಜಿ ಸ್ಪೆಕ್ಟ್ರಂ ಹಗರಣಕ್ಕಿಂತ ದೊಡ್ಡದಾಗಿದ್ದು, ಈ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ. ಗಣಿಗಾರಿಕೆ ಪಾಲುದಾರರಾದ ಕರುಣಾಕರರೆಡ್ಡಿ ಕಂದಾಯ ಸಚಿವರಾಗಿದ್ದಾಗ ಈ ಕಾರ್ಯಪಡೆಯನ್ನು ದಿಢೀರನೆ ರದ್ದುಗೊಳಿಸಿದರು ಎಂದು ಹೇಳಿದರು.
ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆ ಮತ್ತೆ ಆರಂಭಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿಲ್ಲ. ಗಣಿ ಮತ್ತು ಭೂವಿಜ್ಞಾನ ನಿರ್ದೇಶಕರು ಗಣಿಗಾರಿಕೆ ಪುನರಾರಂಭದ ಬಗ್ಗೆ ಹೇಗೆ ಹೇಳಿಕೆ ನೀಡಿದರೋ ಗೊತ್ತಿಲ್ಲ. ಒಟ್ಟು 176 ಗಣಿ ಕಂಪೆನಿಗಳು ಸ್ಥಗಿತವಾಗಿವೆ. ಕಾಯ್ದೆಬದ್ಧ ಗಣಿಗಾರಿಕೆಗೆ ನಮ್ಮ ತಕರಾರು ಇಲ್ಲ ಎಂದು ಹಿರೇಮಠ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.