ADVERTISEMENT

ಹನುಮನಕಟ್ಟೆ: ಜೋಡಿ ಕೆರೆಗಳಿಗೆ ಭರಪೂರ ನೀರು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 7:40 IST
Last Updated 7 ಅಕ್ಟೋಬರ್ 2017, 7:40 IST
ಚಿಕ್ಕಜಾಜೂರು ಸಮೀಪದ ಹನುಮನಕಟ್ಟೆ ಗ್ರಾಮದ ಕೆರೆಯಲ್ಲಿ ಶುಕ್ರವಾರ ತೂಬಿನ ಎತ್ತರದಷ್ಟು ನೀರು ಸಂಗ್ರಹವಾಗಿರುವ ದೃಶ್ಯ.
ಚಿಕ್ಕಜಾಜೂರು ಸಮೀಪದ ಹನುಮನಕಟ್ಟೆ ಗ್ರಾಮದ ಕೆರೆಯಲ್ಲಿ ಶುಕ್ರವಾರ ತೂಬಿನ ಎತ್ತರದಷ್ಟು ನೀರು ಸಂಗ್ರಹವಾಗಿರುವ ದೃಶ್ಯ.   

ಚಿಕ್ಕಜಾಜೂರು: ಜೋಡಿ ಕೆರೆಗಳಿಗೆ ಒಂದೇ ದಿನದಲ್ಲಿ ಎರಡು ಅಡಿಗಳಷ್ಟು ನೀರು ಹರಿದು ಬಂದಿದ್ದು, ತೋಟದ ಬೆಳೆಗಾರರಲ್ಲಿ ಸಂತಸ ಮನೆ ಮಾಡಿದೆ. ಒಂದು ತಿಂಗಳಿಂದ ಆಗಾಗ್ಗೆ ಬೀಳುತ್ತಿದ್ದ ಮಳೆಯಿಂದಾಗಿ ಕೆರೆಗಳಿಗೆ ನೀರು ಹರಿದು ಬರುತ್ತಿದೆ. ಸಮೀಪದ ಹನುಮನಕಟ್ಟೆ ಮತ್ತು ಕೇಶವಾಪುರ ಗ್ರಾಮಗಳ ಜೋಡಿ ಕೆರೆಗಳಲ್ಲಿ ನಾ ಲ್ಕೈದು ಅಡಿಗಳಷ್ಟು ನೀರು ಬಂದಿದೆ.

ಒಂದು ಗಂಟೆಯಲ್ಲಿ ಎರಡು ಅಡಿ ನೀರು: ಬುಧವಾರ ರಾತ್ರಿ ಸುಮಾರು ಒಂದು ಗಂಟೆ ಸುರಿದ ಮಳೆಯಿಂದಾಗಿ ಜೋಡಿ ಕೆರೆಗಳಲ್ಲಿ ಎರಡು ಅಡಿಯಷ್ಟು ನೀರು ಏರಿಕೆ ಕಂಡಿದೆ. ಕೇಶವಾಪುರದ ದೊಡ್ಡ ಕೆರೆಯಲ್ಲಿ ಬೆಳಿಗ್ಗೆ ನೀರಿನ ಮಟ್ಟ ಆರು ಅಡಿಗೆ ಏರಿಕೆ ಕಂಡಿದೆ. ಹನುಮನಕಟ್ಟೆ ಕೆರೆಯಲ್ಲಿಯೂ ಎರಡು ಅಡಿಗೂ ಹೆಚ್ಚು ನೀರು ಹರಿದು ಬಂದಿದೆ ಎನ್ನುತ್ತಾರೆ ಗ್ರಾಮದ ಶ್ರೀಧರ, ಮಂಜುನಾಥ್, ಕೆಂಚವೀರಪ್ಪ.

ಕಳೆದ ಏಪ್ರಿಲ್‌, ಮೇ ತಿಂಗಳಲ್ಲಿ ಕೆರೆಗಳು ಪೂರ್ತಿಯಾಗಿ ಖಾಲಿಯಾಗಿದ್ದು, ದನ ಕರುಗಳು ನೀರಿಗಾಗಿ ಪರದಾಡುವ ಸ್ಥಿತಿ ಇತ್ತು. ಈಗ ಕೆರೆಯಲ್ಲಿ ನೀರು ಹರಿದು ಬಂದಿರುವುದು ರೈತರ ಮೊಗದಲ್ಲಿ ಹರ್ಷ ಮನೆ ಮಾಡಿದೆ.

ADVERTISEMENT

ಕೆರೆಗಳಲ್ಲಿ ನೀರು ಸಂಗ್ರಹಣೆಯಾಗಿರುವುದು ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳ ಆಗುವುದು. ಇದರಿಂದ ಮುಂದಿನ ಬೇಸಿಗೆಯಲ್ಲಿ ಕೊಳವೆ ಬಾವಿಗಳ ನೀರು ಕಡಿಮೆ ಆಗುವುದು ತಪ್ಪಿತು ಎನ್ನುತ್ತಾರೆ ಗ್ರಾಮದ ಮುರುಗೇಂದ್ರಪ್ಪ, ತಿಮ್ಮಣ್ಣ, ಬಸವರಾಜ್‌ ಮತ್ತಿತರರು.

ನೀರು ಸೋರಿಕೆ: ಕೇಶವಾಪುರದ ಕೆರೆಯ ತೂಬಿನ ಕೊಳವೆ ಹೊಡೆದು ಹೋಗಿರುವುದರಿಂದ ಸೆಪ್ಟಂಬರ್‌ ತಿಂಗಳಿನಲ್ಲಿ ಸಾಕಷ್ಟು ನೀರು ವ್ಯರ್ಥವಾಗಿ ಹರಿದು ಹೋಗಿತ್ತು.
ನಂತರದಲ್ಲಿ ಸಣ್ಣ ನೀರಾವರಿ ಇಲಾಖೆ ಹಾಗೂ ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ನೀರಿನ ಸೋರಿಕೆ  ನಿಲ್ಲಿಸಲಾಗಿದೆ. 

ಸಂಬಂಧ ಪಟ್ಟ ಸಣ್ಣ ನೀರಾವರಿ ಇಲಾಖೆ ತಕ್ಷಣ ನೀರು ಸೋರಿಕೆಯನ್ನು ಶಾಶ್ವತವಾಗಿ ತಡೆಯಬೇಕು ಎಂದು  ಕೇಶವಾಪುರ, ಹನುಮನಕಟ್ಟೆ, ಅರಸನಘಟ್ಟ, ಚಿಕ್ಕಂದವಾಡಿ ಗ್ರಾಮಗಳ ರೈತರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.