ADVERTISEMENT

ಹಳ್ಳಿಗಳ ವಿದ್ಯುತ್ ಸಮಸ್ಯೆಗೆ ಸೌರಶಕ್ತಿ ಶಾಶ್ವತ ಪರಿಹಾರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 8:52 IST
Last Updated 21 ಸೆಪ್ಟೆಂಬರ್ 2013, 8:52 IST

ಚಿತ್ರದುರ್ಗ: ಅನಿಮಿಯತ ವಿದ್ಯುತ್ ಕೊರತೆಯಿಂದ ಪಾರಾಗಲು ಸೌರಶಕ್ತಿ ವಿದ್ಯುತ್ ಸೌಲಭ್ಯವನ್ನು ಪರ್ಯಾಯವಾಗಿ ಬಳಸಿಕೊಳ್ಳಬಹುದು ಎಂದು ಸೆಲ್ಕೊ ಸಂಸ್ಥೆಯ ಜಿಲ್ಲಾ ಶಾಖೆಯ ಹಿರಿಯ ವ್ಯವಸ್ಥಾಪಕ ಮಂಜುನಾಥ್ ಭಾಗವತ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ದೊಡ್ಡ ಸಿದ್ದವ್ವನಹಳ್ಳಿಯಲ್ಲಿ  ಸೆಲ್ಕೋ ಸೋಲಾರ್ ಸಂಸ್ಥೆ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಡಿ.ಎಸ್. ಹಳ್ಳಿ, ಗ್ರಾಮ ಪಂಚಾಯ್ತಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸೋಲಾರ್ ಗೃಹಬಳಕೆ ದೀಪಗಳ ಪ್ರಾತ್ಯಕ್ಷಿಕೆ ಮತ್ತು ಉಚಿತ ಸೇವಾ ಶಿಬಿರದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಸೌರವಿದ್ಯುತ್ ಅಳವಡಿಸಿಕೊಳ್ಳವವರಿಗೆ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಪ್ರೋತ್ಸಾಹ ರೂಪದಲ್ಲಿ ಸಾಲ ನೀಡುತ್ತಿದ್ದು. ಸಬ್ಸಿಡಿಯನ್ನು   ಕೂಡ ನೀಡಲಾಗುತ್ತಿದೆ. ಬೇರೆ ಬೇರೆ ರಾಷ್ಟ್ರೀಕೃತ ಬ್ಯಾಂಕುಗಳು ಅನುಕೂಲ ಒದಗಿಸಿದಲ್ಲಿ ಗ್ರಾಮೀಣ ಜನರು ವಿದ್ಯುತ್ ಸಮಸ್ಯೆಯಿಂದ ಮುಕ್ತರಾಗಬಹುದು ಎಂದು ಅಭಿಪ್ರಾಯ ಪಟ್ಟರು. ಡಿ.ಎಸ್. ಹಳ್ಳಿಯ ವ್ಯಾಪ್ತಿಯಲ್ಲಿ   ಸುಮಾರು ೭೦ ಕ್ಕೂ ಹೆಚ್ಚು ಮನೆಗಳಿಗೆ  ಸೋಲಾರ್ ದೀಪಗಳನ್ನು ಅಳವಡಿಸಲಾಗಿದ್ದು, ಈ ಎಲ್ಲಾ ಮನೆಗಳಿಗೆ ಉಚಿತವಾಗಿ ಈ ಸೇವಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. 

ಶಿಬಿರ ಉದ್ಘಾಟಿಸಿದ ಪ್ರಗತಿ ಗ್ರಾಮೀಣ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಕೆ.ಸಿ.ನಾರಾಯಣಪ್ಪ, ದೊಡ್ಡಸಿದ್ದವ್ವನಹಳ್ಳಿಯನ್ನು ನಮ್ಮ ಬ್ಯಾಂಕ್‌ನಿಂದ ಸಂಪೂರ್ಣ ಸೋಲಾರ್ ಗ್ರಾಮ ಎಂದು ಘೋಷಿಸಿದೆ. ಪ್ರಕೃತಿಯಲ್ಲಿ ದೊರೆಯುವ ಸೌರಶಕ್ತಿ ಬಳಸಿಕೊಂಡು ಹಳ್ಳಿಗಳಲ್ಲಿನ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಗ್ರಾಮ ಪಂಚಾಯ್ತಿ ಸದಸ್ಯ ಸೋಮಶೇಖರ್ ಮಾತನಾಡಿ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನವರು ಸೌರಶಕ್ತಿ ವಿದ್ಯುತ್ ಅಳವಡಿಸಿಕೊಳ್ಳುವುದಕ್ಕಾಗಿ ನೀಡುವ ಸಾಲ ಸೌಲಭ್ಯವನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಂಡು
ಡಿ.ಎಸ್.ಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಪ್ರಯತ್ನಿಸೋಣ’ ಎಂದು  ಆಹ್ವಾನಿಸಿದರು.

ಇದೇ ಸಂದರ್ಭದಲ್ಲಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಹಿರಿಯ ವ್ಯವಸ್ಥಾಪಕರಾದ ನಾರಾಯಣಪ್ಪ ಅವರನ್ನು ಗ್ರಾಮ ಪಂಚಾಯ್ತಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು. ಸೆಲ್ಕೊ ಸಂಸ್ಥೆಯ ಕಾರ್ಯ  ನಿರ್ವಾಹಕ ರಮೇಶ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.