ADVERTISEMENT

ಸೆ.27ಕ್ಕೆ ರೈತ, ಕಾರ್ಮಿಕ ಸಂಘಟನೆಗಳಿಂದ ರಾಜ್ಯ ಬಂದ್‌ಗೂ ತೀರ್ಮಾನ

ರೈತ, ಕಾರ್ಮಿಕ ಸಂಘಟನೆಗಳಿಂದ ನಡೆದ ಸಭೆಯಲ್ಲಿ ಭಾರತ್‌ ಬಂದ್‌ಗೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 3:38 IST
Last Updated 23 ಸೆಪ್ಟೆಂಬರ್ 2021, 3:38 IST
ಭಾರತ್‌ ಬಂದ್‌ಗೆ ಬೆಂಬಲ ನೀಡುವ ಸಂಬಂಧ ಚಿತ್ರದುರ್ಗದಲ್ಲಿ ಬುಧವಾರ ಸಂಯುಕ್ತ–ಕರ್ನಾಟಕ ಸಂಘಟನೆ, ರೈತ ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರು ಸಭೆ ನಡೆಸಿದರು
ಭಾರತ್‌ ಬಂದ್‌ಗೆ ಬೆಂಬಲ ನೀಡುವ ಸಂಬಂಧ ಚಿತ್ರದುರ್ಗದಲ್ಲಿ ಬುಧವಾರ ಸಂಯುಕ್ತ–ಕರ್ನಾಟಕ ಸಂಘಟನೆ, ರೈತ ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರು ಸಭೆ ನಡೆಸಿದರು   

ಚಿತ್ರದುರ್ಗ: ಕೇಂದ್ರ ಸರ್ಕಾರದ ನೂತನ ಕೃಷಿ, ಕಾರ್ಮಿಕ, ವಿದ್ಯುತ್ ಕಾಯ್ದೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೆ. 27ರಂದು ಭಾರತ್‌ ಬಂದ್‌ಗೆ ಕರೆ ನೀಡಿದೆ. ಇದನ್ನು ಬೆಂಬಲಿಸಲು ಬುಧವಾರ ನಡೆದ ರೈತ ಹಾಗೂ ಕಾರ್ಮಿಕ ಸಂಘಟನೆಗಳ ಸಭೆಯಲ್ಲಿ ಮುಖಂಡರು ತೀರ್ಮಾನಿಸಿದರು.

‘ದೇಶದ ರಾಜಧಾನಿ ದೆಹಲಿಯಲ್ಲಿ ಸತತ 10 ತಿಂಗಳಿಂದ ಕಾಯ್ದೆ ವಿರೋಧಿಸಿ ನಿರಂತರವಾಗಿ ರೈತರು, ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸರ್ಕಾರ ನಿಲುವನ್ನು ಬದಲಿಸುತ್ತಿಲ್ಲ. ಇದನ್ನು ಖಂಡಿಸಿ ಅಂದು ರಾಜ್ಯ ಬಂದ್‌ಗೂ ತೀರ್ಮಾನಿಸಲಾಗಿದೆ’ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನುಲೇನೂರು ಶಂಕರಪ್ಪ ತಿಳಿಸಿದರು.

‘ಕಾಯ್ದೆಗಳನ್ನು ಹಿಂಪಡೆಯಬೇಕು ಎಂಬ ನಿಟ್ಟಿನಲ್ಲಿ 600ಕ್ಕೂ ಅಧಿಕ ರೈತರ ಪ್ರಾಣ ಬಲಿದಾನವಾಗಿದೆ. ಹೀಗಿದ್ದರೂ ಪ್ರಧಾನಿ ಅವರು ತಮ್ಮ ನಡೆ ಬದಲಿಸುತ್ತಿಲ್ಲ. ಹೀಗಾಗಿ ಪ್ರತಿಭಟನೆ ಅನಿವಾರ್ಯವಾಗಿದ್ದು, ಯಾವ ಕಾರಣಕ್ಕೂ ನಿಲ್ಲಿಸುವುದಿಲ್ಲ. ವಿದ್ಯಾರ್ಥಿ, ಯುವಸಮೂಹ ಹಾಗೂ ಮಹಿಳಾ ಸಂಘಟನೆಗಳು ಕೂಡ ಬೆಂಬಲ ನೀಡುತ್ತಿವೆ’ ಎಂದರು.

ADVERTISEMENT

‘ಭಾರತ್ ಬಂದ್ ಪ್ರಾಯೋಜಿತ ಎಂಬುದಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟೀಕಿಸಿದ್ದಾರೆ. ರೈತ, ಕಾರ್ಮಿಕ, ಜನಪರವಾಗಿದ್ದರೆ ವಿರೋಧಿಸುತ್ತಿರಲಿಲ್ಲ. ಗೌರವಯುತ ಸ್ಥಾನದಲ್ಲಿ ಇರುವವರು ಯೋಚಿಸಿ ಮಾತನಾಡಬೇಕು’ ಎಂದರು.

‘ಜಿಲ್ಲಾ ಬಂದ್ ಸಫಲತೆ ಕಾಣಲು ಎಲ್ಲ ರೈತ ಸಂಘಟನೆಗಳು ಕೈಜೋಡಿಸಬೇಕು. ಈಗಾಗಲೇ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ನಾಗರಿಕರು, ವರ್ತಕರು ಕೂಡ ಸಹಕರಿಸಬೇಕು’ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು ಮನವಿ ಮಾಡಿದರು.

ವಿವಿಧ ಸಂಘಟನೆಗಳ ಮುಖಂಡರಾದ ರವಿಕುಮಾರ್, ಮಹಾಂತೇಶ್, ಧನಂಜಯ, ಡಿಎಸ್‌ಹಳ್ಳಿ ಮಲ್ಲಿಕಾರ್ಜುನ, ಪದ್ಮಾ, ಟಿ.ಷಫೀವುಲ್ಲಾ, ರಾಮರೆಡ್ಡಿ, ಪ್ರಭು, ಸಿ.ಕೆ. ಗೌಸ್‌ಪೀರ್, ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.