ಹೊಸದುರ್ಗ: ಮಹಾರಾಷ್ಟ್ರದ ಭೀಮಾ ಕೋರೆಂಗಾವ್ 200ನೇ ವಿಜಯೋತ್ಸವದ ಅಂಗವಾಗಿ ಸೇರಿದ್ದ ದಲಿತರು ಹಾಗೂ ಹಿಂದುಳಿದ ವರ್ಗದವರ ಮೇಲೆ ವಿದ್ವಂಸಕ ಕೃತ್ಯ ಎಸಗಿರುವುದನ್ನು ಖಂಡಿಸಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸದಸ್ಯರು ಪಟ್ಟಣದ ಟಿ.ಬಿ.ವೃತ್ತದಲ್ಲಿ ಶುಕ್ರವಾರ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
200ನೇ ವಿಜಯೋತ್ಸವ ಅಡ್ಡಿಪಡಿಸಲೆಂದೇ ಪೂರ್ವ ನಿಯೋಜಿತವಾಗಿ ಮನುವಾದಿ, ಕೋಮುವಾದಿ ಸಂಘಟನೆಗಳು ವಾಹನಗಳ ಮೂಲಕ ಜಲ್ಲಿಕಲ್ಲು, ಮಾರಕಾಸ್ತ್ರ ತಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಲಿತರು, ಹಿಂದುಳಿದ ಜನ ಸಮುದಾಯದ ಮೇಲೆ ಕಲ್ಲು ತೂರಿ ವಾಹನಗಳಿಗೆ ಬೆಂಕಿ ಹಚ್ಚಿರುವುದು ಸಮಾಜಘಾತಕ ಕೃತ್ಯವ ಎಂದು ದೂರಿದರು.
ಶತ ಶತಮಾನಗಳಿಂದಲೂ ದಲಿತರು ಹಾಗೂ ಹಿಂದುಳಿದ ವರ್ಗದವರನ್ನು ಶೋಷಣೆ ಮಾಡುತ್ತಿದ್ದು, ಇದರಿಂದ ಸಮಾಜದ ಸ್ವಾಸ್ಥ್ಯ ಹಾಳು ಮಾಡಲಾಗುತ್ತಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಮನುವಾದಿ ಸಂಘಟನೆಗಳನ್ನು ನಿಷೇಧಿಸಬೇಕು. ಹಿಂದೂ ಸಂಘಟನೆಗಳೆಂದು ಹೇಳಿಕೊಂಡು ಹಿಂದೂಗಳನ್ನೇ ಪ್ರಾಣಿಗಳಿಗಿಂತ ಕೀಳಾಗಿ ಕಾಣಲಾಗುತ್ತಿದೆ. ದಲಿತ ಸಮುದಾಯದ ಮೇಲೆ ಹಲ್ಲೆ ನಡೆಸುವ ಸಂಘಟನೆಗಳು ಭಯೋತ್ಪಾದಕ ಸಂಘಟನೆಗಳಿಗಿಂತ ಒಂದು ಹೆಜ್ಜೆ ಮುಂದೆ ಇವೆ. ಇಂತಹ ಕ್ರೂರ ಸಂಘಟನೆಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ, ಮಾದಿಗ ಸಮಾಜದ ಅಧ್ಯಕ್ಷ ಆರ್.ತಿಪ್ಪಯ್ಯ, ಮುಖಂಡರಾದ ರಾಜಪ್ಪ, ತಿಪ್ಪೇಸ್ವಾಮಿ, ಶಂಕರಪ್ಪ, ಆಂಜಿನಪ್ಪ, ಮೂಡಲಗಿರಿಯಪ್ಪ, ಹನುಮಂತಪ್ಪ, ಅಂಜನಮೂರ್ತಿ, ಕರಿಯಪ್ಪ, ಕಲ್ಲೇಶ್, ಕಾಳಪ್ಪ, ನಾಗರಾಜು, ಮಂಜುನಾಥ್, ಪ್ರಕಾಶ್, ಶಿವಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.