ಚಿತ್ರದುರ್ಗ: ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ನಿವೃತ್ತ ನೌಕರ ಆರ್.ಶೇಷಣ್ಣಕುಮಾರ್ ಅವರು ಆಮ್ ಆದ್ಮಿ ಪಕ್ಷ(ಎಎಪಿ) ಸೇರಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಎಎಪಿ ರಾಜ್ಯದ ಉಸ್ತುವಾರಿ ದಿಲೀಪ್ ಪಾಂಡೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ವೆಂಕಟೇಶ್ ಹಾಗೂ ಮುಖಂಡ ಆಂತೋಳೆ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು.
‘ಮೂರೂವರೆ ದಶಕಗಳ ರಾಜಕೀಯ ಪಯಣದ ಏರಿಳಿತದ ನಡುವೆ ಮತ್ತೊಂದು ತಿರುವು ಸಿಕ್ಕಿದೆ. ಸೋಲಿನ ಕಹಿ ನೆನಪುಗಳ ಸರಮಾಲೆ ಕಣ್ಣ ಮುಂದೆ ಇದ್ದರೂ ಜನಸೇವೆಯ ಉತ್ಸಾಹ ಇನ್ನೂ ಕುಂದಿಲ್ಲ. ಹಲವು ಪಕ್ಷಗಳಲ್ಲಿ, ಹೋರಾಟಗಳಲ್ಲಿ, ಸಮಾಜಮುಖಿ ಕೆಲಸಗಳಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸಿರುವ ಅನುಭವವೇ ನನಗೆ ಸದಾ ಸ್ಫೂರ್ತಿ' ಎಂದು ಶೇಷಣ್ಣಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಇತ್ತೀಚಿನ ದಿನಗಳಲ್ಲಿ ರಾಷ್ಟ್ರ ರಾಜಕೀಯದಲ್ಲಿ ಹಲವು ವಿದ್ಯಮಾನಗಳು ನಡೆಯುತ್ತಿವೆ. ಸೋತಿರುವ ಮತದಾರರೆಲ್ಲರ ಸದಾಶಯಗಳಿಗೆ ಸ್ಪಷ್ಟವಾಗಿ, ಪಾರದರ್ಶಕವಾಗಿ ಸ್ಪಂದಿಸುವ ರಾಷ್ಟ್ರದ ಏಕೈಕ ಪಕ್ಷ ಎಎಪಿ' ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಕಟ್ಟಾ ಬೆಂಬಲಿಗರಾಗಿದ್ದ ಶೇಷಣ್ಣಕುಮಾರ್ ಅವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ರಾಜಕೀಯ ಪಕ್ಷಗಳಿಂದ ದೂರವಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.