ADVERTISEMENT

ಮದುವೆ ಹಾಡುಗಾರಿಕೆಗೆ ಒಲಿದ ಗೌರವ

ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಗೊಲ್ಲರಹಳ್ಳಿಯ ಕಲಾವಿದೆ ಕೆಂಚಮ್ಮ

ಎಸ್.ಸುರೇಶ್ ನೀರಗುಂದ
Published 5 ಜನವರಿ 2021, 7:35 IST
Last Updated 5 ಜನವರಿ 2021, 7:35 IST
ಕೆಂಚಮ್ಮ
ಕೆಂಚಮ್ಮ   

ಹೊಸದುರ್ಗ: ತಾಲ್ಲೂಕಿನ ಬುಕ್ಕಸಾಗರ ಗೊಲ್ಲರಹಳ್ಳಿ ಗ್ರಾಮದ 80 ವರ್ಷದ ಜಾನಪದ ಕಲಾವಿದೆ ಕೆಂಚಮ್ಮ ಅವರು ಹಾಡುತ್ತಿದ್ದ ಮದುವೆ ಹಾಡಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

‘ಸೋಬಾನೆ ಕೆಂಚಮ್ಮ’ ಎಂದೇ ಪ್ರಸಿದ್ಧವಾಗಿರುವ ಅವರ ಪ್ರೇರಣೆಯಿಂದ ಇಡೀ ಊರೇ ಜನಪದ ಮಂಟಪವಾಗಿ ನಿರ್ಮಾಣವಾಗಿದೆ. ಸುಮಾರು 55 ಮನೆ ಹಾಗೂ 300 ಜನ ವಾಸಿಸುತ್ತಿರುವ ಈ ಗ್ರಾಮದ ಕಲಾವಿದೆ ಕೆಂಚಮ್ಮ ಅವರು ಪ್ರಶಸ್ತಿ ಲಭಿಸಿರುವ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

* ಮದುವೆ ಹಾಡುಗಳನ್ನು ಎಷ್ಟು ವರ್ಷಗಳಿಂದ ಹಾಡುತ್ತಿದ್ದೀರಿ?

ADVERTISEMENT

ನನ್ನ ತಾಯಿ ಗದ್ದೆರಂಗಜ್ಜಿ ಸಾಕಷ್ಟು ಜನಪದ ಹಾಡುಗಳನ್ನು ಹಾಡುತ್ತಿದ್ದರು. ಹಾಗಾಗಿ ಅವರನ್ನು ಅನುಕರಣೆ ಮಾಡಿದೆ. ಬಾಲಕಿ ಆಗಿದ್ದಾಗಿನಿಂದಲೂ ತಾಳಕ್ಕೆ ತಕ್ಕಂತೆ ಜನಪದ ಹಾಡುಗಳನ್ನು ಹಾಡುವುದು ಕಲಿತಿದ್ದೆ. ಹಾಗೆಯೇ ಕಾಡು ಜನರು ಹಾಡುತ್ತಿದ್ದನ್ನು ನೋಡಿ ಒಂದಿಷ್ಟು ಕಲಿತಿದ್ದೆ. ಈಗಲೂ ವಿವಿಧ ಹಾಡು ಹಾಡುತ್ತೇನೆ. ಜನಪದ ಕಲೆಗೆ ಸಂಬಂಧಿಸಿದ ಹಾಡು ಹೇಳುವುದು ಎಂದರೆ ತುಂಬಾ ಇಷ್ಟ.

* ಯಾವ ಯಾವ ರೀತಿಯ ಹಾಡು ಹೇಳುತ್ತೀರಿ?

ಮದುವೆ, ಸೋಬಾನೆ, ಬೀಸುವ ಹಾಗೂ ಕುಟ್ಟುವ, ಒಕ್ಕಲುತನ, ದೇವರ ನಾಮ, ಜನಪದ ವೀರರ ಮಹಿಮೆ, ಪಶುಪಾಲನೆ ಹಾಡುಗಳನ್ನು ಹಾಡುತ್ತೇನೆ. ಮೈಸೂರಿನಲ್ಲಿ ನಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮ, ಬೆಂಗಳೂರು, ಉಡುಪಿ, ಧರ್ಮಸ್ಥಳ ಸೇರಿ ಇನ್ನಿತರ ಕಡೆ ಯಾದವ ಸಮುದಾಯದಿಂದ ನಡೆದ ಹಲವು ಕಾರ್ಯಕ್ರಮಗಳಲ್ಲಿ ಹಾಡಿದ್ದೇನೆ. ಈಗಲೂ ನಮ್ಮ ಊರು ಸೇರಿ ಸುತ್ತಮುತ್ತಲ ಗ್ರಾಮದಲ್ಲಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ಕೆ ಕರೆದರೆ ಅಲ್ಲಿಗೆ ಹೋಗಿ ಹಾಡುತ್ತೇನೆ.

* ನಿಮ್ಮಿಂದ ನಿಮ್ಮ ಕುಟುಂಬದಲ್ಲಿ ಎಷ್ಟು ಜನ ಹಾಡು ಕಲಿತಿದ್ದಾರೆ?

ನನ್ನ ಪತಿ ಕಾಡಪ್ಪ ಜನಪದ ಕಲಾವಿದರಾಗಿದ್ದು, ಈಗಲೂ ಕೋಲಾಟದ ತರಬೇತಿ ನೀಡುತ್ತಾರೆ. ಇದರ ಜತೆಗೆ ಜನಪದ ಹಾಡುಗಳನ್ನು ಹೇಳುತ್ತಾರೆ. ಪುತ್ರ ಕಾ.ರಮೇಶ್ವರಪ್ಪ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಾಗಿದ್ದು, ಆತನು ಹಲವು ಬಗೆಯ ಜನಪದ ಹಾಡುಗಳನ್ನು ನನ್ನಿಂದ ಕಲಿತಿದ್ದಾನೆ. ನನ್ನ ಇನ್ನೊಬ್ಬ ಪುತ್ರ ಲಕ್ಷ್ಮಣಪ್ಪ ಹಾಗೆಯೇ, ಮೊಮ್ಮೊಗಳಾದ ಸ್ಪಂದನ ರಮೇಶ್ವರಪ್ಪ ಹಾಡುತ್ತಿದ್ದಾರೆ. ಹಾಗಾಗಿ, ನಮ್ಮದು ಜನಪದ ಹಾಡು ಹೇಳುವ ಕಲಾ ಕುಟುಂಬವಾಗಿ ಹೊರಹೊಮ್ಮಿದೆ.

* ಏನು ಓದಿದ್ದೀರಿ?

ನಮ್ಮದು ಕಡುಬಡತನದ ಕುಟುಂಬ. ಬಡತನದಲ್ಲಿಯೇ ಬೆಳೆದ ನಾನು ಶಾಲೆಗೆ ಹೋಗಲು ಸಾಧ್ಯವೇ ಆಗಲಿಲ್ಲ. ನಮಗೆ ಅಕ್ಷರ ಜ್ಞಾನದ ಮಹತ್ವವೂ ತಿಳಿದಿರಲಿಲ್ಲ. ಹಾಗಾಗಿ, ಬಾಲ್ಯದಲ್ಲಿ ತಂದೆ, ಪತಿಯ ಕೃಷಿ ಹಾಗೂ ಪಶುಪಾಲನೆ ಕಾಯಕಕ್ಕೆ ಆಸರೆಯಾಗಿದ್ದೆ. ಶಾಲೆಯ
ಮೆಟ್ಟಿಲು ತುಳಿಯಲು ಸಾಧ್ಯವಾಗದ ನನಗೆ ಏನನ್ನು ಓದಲು ಸಾಧ್ಯವಾಗಲಿಲ್ಲ.

* ಜನಪದ ಕಲೆಯ ಬಗ್ಗೆ ನಿಮ್ಮ ಅಭಿಪ್ರಾಯ?

ಜನಪದ ಕಲೆಯು ನಮ್ಮ ನಾಡಿನ ಸನಾತನ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ನೆಲ, ಜಲದ ಪ್ರತೀಕವಾಗಿದೆ. ಅದರಲ್ಲಿ ನಮ್ಮ ಜನರ ಬದುಕಿನ ಮೌಲ್ಯ ಅಡಗಿದೆ. ಇಂತಹ ಜನಪದ ಕಲೆಯು ಅವಸಾನ ಹೊಂದುತ್ತಿದೆ. ಹಾಗಾಗಿ ಇಂತಹ ಕಲೆಯನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ಇಂದಿನ ಯುವಜನಾಂಗ ಮಾಡಬೇಕಿದೆ.

***

ವಿದ್ಯಾವಂತೆಯೂ ಅಲ್ಲದ, ಜನ್ಮ ದಿನವೂ ಗೊತ್ತಿರದ ನಮ್ಮಂತ ಕುಗ್ರಾಮದ ಮುಗ್ಧ ಜನಪದ ಕಲಾವಿದೆಯನ್ನು ಇಳಿವಯಸ್ಸಿನಲ್ಲಿ ಗುರುತಿಸಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ.

-ಕೆಂಚಮ್ಮ, ಗೊಲ್ಲರಹಳ್ಳಿ ಜಾನಪದ ಕಲಾವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.