ADVERTISEMENT

ಆರೋಗ್ಯ ನಿರೀಕ್ಷಕರ ವಿರುದ್ಧ ದೂರು ದಾಖಲಿಸಿ

ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರದ ಸಭೆ – ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 3:16 IST
Last Updated 24 ಜುಲೈ 2025, 3:16 IST
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿದರು
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿದರು   

ಚಿತ್ರದುರ್ಗ: ‘ಗೂಡಂಗಡಿ, ಹೋಟೆಲ್‌ ಸೇರಿದಂತೆ ಆಹಾರ ಮಾರಾಟ ಅಂಗಡಿಗಳಲ್ಲಿ ಶುಚಿತ್ವದ ಕೊರತೆ ಕಂಡುಬಂದರೆ ಆರೋಗ್ಯ ನಿರೀಕ್ಷಕರ ವಿರುದ್ಧ ದೂರು ದಾಖಲಿಸಿ‍’ ಎಂದು ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತಾಧಿಕಾರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

‘ತಪಾಸಣೆ ವೇಳೆ ಹೋಟೆಲ್‌ ಹಾಗೂ ಗೂಡಂಗಡಿಗಳಲ್ಲಿ ಶುಚಿತ್ವ ಇಲ್ಲದಿರುವುದು ಕಂಡು ಬಂದರೆ ಮಾಲೀಕರನ್ನು ಮೊದಲ ಹಾಗೂ ಆರೋಗ್ಯ ನಿರೀಕ್ಷಕರನ್ನು ಎರಡನೇ ದೋಷಿಯನ್ನಾಗಿ ದೂರು ದಾಖಲಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಆಹಾರ ಸುರಕ್ಷತಾ ಕಾಯ್ದೆಯಡಿ ಮಾಲೀಕರ ಜೊತೆಗೆ ಆರೋಗ್ಯ ನಿರೀಕ್ಷಕರಿಗೂ ಲಕ್ಷದವರೆಗೂ ದಂಡ ವಿಧಿಸಲಾಗುವುದು. ಎಚ್ಚೆತ್ತು ಕೊಳ್ಳದಿದ್ದರೆ ಇಲಾಖೆ ವಿಚಾರಣೆ ಹಾಗೂ ಅಮಾನತಿಗೂ ಶಿಫಾರಸ್ಸು ಮಾಡುವುದಾಗಿ’ ಎಚ್ಚರಿಸಿದರು.

‘ಕಳಪೆ ಹಾಗೂ ಕಲಬೆರಕೆ ಆಹಾರ ಸೇವನೆಯಿಂದ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಹೋಟೆಲ್‌ಗಳು ಅಷ್ಟೇ ಅಲ್ಲದೇ, ಪ್ಯಾಕೇಜಿಂಗ್‌ ಆಹಾರ ತಯಾರಿಕಾ ಘಟಕಗಳಲ್ಲಿಯೂ ಶುಚಿತ್ವ ಹಾಗೂ ಗುಣಮಟ್ಟದ ಕೊರತೆ ಕಂಡು ಬರುತ್ತಿದೆ. ನಗರಗಳಲ್ಲಿ ಅನುಮತಿ ಪಡೆಯದೇ ಎಲ್ಲೆಂದರಲ್ಲಿ ಗೂಡಂಗಡಿಗಳು ತಲೆ ಎತ್ತುತ್ತಿವೆ. ಆರೋಗ್ಯ ನಿರೀಕ್ಷಕರು ಇಂತಹ ಅಂಗಡಿಗಳಿಗೆ ಭೇಟಿ ನೀಡಿ, ಶುಚಿತ್ವ ಪರಿಶೀಲಿಸಿ, ದಂಡ ವಿಧಿಸಿದ್ದೀರಾ’ ಎಂದು ಪ್ರಶ್ನಿಸಿದರು.

‘ಅನುಮತಿ ಇರದಿದ್ದರೂ ಜಿಲ್ಲಾ ಆಸ್ಪತ್ರೆಯ ಎದುರಿನ ಗೂಡಂಗಡಿಗಳಲ್ಲಿ ತಿಂಡಿ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ತರಕಾರಿ, ಪ್ರಾವಿಜನ್‌ ಸ್ಟೋರ್‌ಗಳಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಬಳಸುತ್ತಿದ್ದಾರೆ. ಇವುಗಳನ್ನು ತಡೆಗಟ್ಟಬೇಕಾದ ಆರೋಗ್ಯ ನಿರೀಕ್ಷಕರು ಕಣ್ಮುಚ್ಚಿ ಕುಳಿತಿದ್ದೀರಿ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅನುಮತಿ ಪಡೆದ ಹಾಗೂ ಪಡೆಯದ ಅಂಗಡಿ, ಹೋಟೆಲ್‌, ಬೇಕರಿ, ಸಿದ್ಧ ಆಹಾರ ತಯಾರಕ ಉದ್ದಿಮೆ, ಶುದ್ಧ ಕುಡಿಯುವ ನೀರು ಸರಬರಾಜು ಘಟಗಳು ಅಂಕಿ– ಅಂಶಗಳನ್ನು ಸಂಗ್ರಹಿಸಬೇಕು. ಪರವಾನಿಗೆ ನವೀಕರಣವಾಗಿದೇ ಎಂಬುದನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಪರಿಶೀಲಿಸಬೇಕೆಂದು’ ನಿರ್ದೇಶನ ನೀಡಿದರು.

‘ಅನುಮತಿ ನೀಡಿದ ಪ್ರಾಣಿ ವಧಾಲಯ, ಚಿಕನ್‌, ಮಟನ್‌ ಹಾಗೂ ಮೀನು ಮಾರಾಟ ಅಂಗಡಿಗಳಲ್ಲಿ ಶುಚಿತ್ವ ಕಾಪಾಡಲಾಗಿದೆಯೇ, ಜೈವಿಕ ತಾಜ್ಯಗಳನ್ನು ನಿಯಮಾನುಸಾರ ವಿಲೇವಾರಿ ಮಾಡುತ್ತಿದ್ದಾರೆಯೇ ಎಂಬುದನ್ನು ಆರೋಗ್ಯ ನಿರೀಕ್ಷಕರು ಪರಿಶೀಲಿಸಬೇಕು. ಬಸ್‌ ನಿಲ್ದಾಣ ಹಾಗೂ ಬೇಕರಿಗಳಲ್ಲಿ ಎಂಆರ್‌ಪಿಗಿಂತ ಹೆಚ್ಚಿನ ದರದಲ್ಲಿ ನೀರು, ಹಾಲು, ಮೊಸರು, ತಂಪು ಪಾನೀಯಗಳನ್ನು ಮಾರಾಟ ಮಾಡುತ್ತಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಿ’ ಎಂದು ತಿಳಿಸಿದರು.

ಆಹಾರ ಸುರಕ್ಷತಾ ಗುಣಮಟ್ಟದ ಪ್ರಾಧಿಕಾರದ ಅಂಕಿತಾಧಿಕಾರಿ ಡಾ.ರಾಜಶೇಖರ್‌ ಪಾಳೆದವರ್‌, ತಾಲ್ಲೂಕು ಮಟ್ಟದ ಆಹಾರ ಸುರಕ್ಷತಾಧಿಕಾರಿ ಕೆ.ಓ. ಮಂಜನಾಥ, ನಾಗೇಶ್‌, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಣಾಧಿಕಾರಿ ಕೆ. ಚನ್ನಬಸಪ್ಪ, ನಗರಸಭೆ ಆರೋಗ್ಯ ನಿರೀಕ್ಷಕರಾದ ರುಕ್ಮುಣಿ, ಕೆ.ವಿ. ಭಾರತಿ, ಹೀನಾ ಕೌಸರ್‌ ಇದ್ದರು.

ಜಂಟಿ ಕಾರ್ಯಾಚರಣೆ ಸೂಚನೆ ‘ಆಹಾರ ಸುರಕ್ಷತಾ ಅಧಿಕಾರಿಗಳು ಕಾನೂನು ಮಾಪನ ಶಾಸ್ತ್ರ ಅಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಕರು ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕು. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ವಾಟ್ಸ್‌ ಆಪ್‌ ಗ್ರೂಪ್‌ ರಚಿಸಿ ಸಂಬಂಧ ಪಟ್ಟವರನ್ನು ಸೇರಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು. ‘ಪ್ರತಿದಿನವು ಅಧಿಕಾರಿಗಳು ಸಮನ್ವಯದೊಂದಿಗೆ ದಾಳಿ ನಡೆಸಬೇಕು. ಶುಚಿತ್ವ ಗುಣಮಟ್ಟ ತೂಕದಲ್ಲಿ ವ್ಯತ್ಯಾಸ ಕಂಡುಬಂದರೆ ಸ್ಥಳದಲ್ಲಿಯೇ ದಂಡ ವಿಧಿಸಬೇಕು. ಪ್ರತಿ ತಿಂಗಳು ಸಭೆ ನಡೆಸಿ ದಾಳಿಗಳ ಬಗ್ಗೆ ಮಾಹಿತಿ ಪಡೆಯುವುದಾಗಿ’ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.