ADVERTISEMENT

ಕೇಂದ್ರದ ನಿರ್ಧಾರಕ್ಕೆ ಸಂಭ್ರಮಾಚರಣೆ

ಜಮ್ಮು–ಕಾಶ್ಮೀರದ ವಿಶೇಷ ಸ್ಥಾನ ರದ್ದು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 14:40 IST
Last Updated 5 ಆಗಸ್ಟ್ 2019, 14:40 IST
ಚಿತ್ರದುರ್ಗದ ಕೆಳಗೋಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಸಂಭ್ರಮಾಚರಣೆ ಮಾಡಿದರು. ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಜಿ.ಎಂ.ಸುರೇಶ್‌ ಇದ್ದಾರೆ.
ಚಿತ್ರದುರ್ಗದ ಕೆಳಗೋಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಸಂಭ್ರಮಾಚರಣೆ ಮಾಡಿದರು. ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಜಿ.ಎಂ.ಸುರೇಶ್‌ ಇದ್ದಾರೆ.   

ಚಿತ್ರದುರ್ಗ: ಜಮ್ಮು–ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನವನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಸೇರಿ ಹಲವು ಸಂಘಟನೆಗಳು ಸೋಮವಾರ ಸಂಭ್ರಮಾಚರಣೆ ಮಾಡಿದವು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕೆಳಗೋಟೆಯ ಪಕ್ಷದ ಕಚೇರಿಯ ಎದುರು ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕಾರ್ಯಕರ್ತರು ಒನಕೆ ಓಬವ್ವ ವೃತ್ತದಲ್ಲಿ ಹಾಗೂ ಬಜರಂಗದಳದ ಸದಸ್ಯರು ಗಾಂಧಿ ವೃತ್ತದಲ್ಲಿ ಸಂಭ್ರಮಾಚರಣೆ ಮಾಡಿದರು.

‘ಇದೊಂದು ಐತಿಹಾಸಿಕ ನಿರ್ಧಾರ. ದೇಶಕ್ಕೆ ಎರಡನೇ ಸ್ವಾತಂತ್ರ್ಯ ಸಿಕ್ಕಷ್ಟು ಹರ್ಷವಾಗಿದೆ. ದೇಶ ಒಂದೇ ಇದ್ದರು ಕಾನೂನು ಭಿನ್ನವಾಗಿದ್ದವು. ಬಹುದಿನಗಳ ಕನಸು ಈಡೇರಿದ್ದು, ದೇಶ ಒಂದು ಎಂಬ ಭಾವನೆ ಮೂಡಲಿದೆ’ ಎಂದು ಬಿಜೆಪಿ ಮುಖಂಡರು ಹರ್ಷ ವ್ಯಕ್ತಪಡಿಸಿದರು.

ADVERTISEMENT

‘ಜನರ ತೆರಿಗೆ ಹಣದ ಬಹುಪಾಲು ಜಮ್ಮು–ಕಾಶ್ಮೀರದ ಪಾಲಾಗುತ್ತಿತ್ತು. ಅಲ್ಲಿಯ ಜನರು ಐಶಾರಾಮಿ ಜೀವನ ನಡೆಸುತ್ತಿದ್ದರು. ಹಲವು ವಿಚಾರಗಳಲ್ಲಿ ಆ ರಾಜ್ಯದ ಜನರಿಗೆ ವಿನಾಯಿತಿ ನೀಡಲಾಗಿತ್ತು. ಮತ ಬ್ಯಾಂಕಿಗಾಗಿ ಕಾಂಗ್ರೆಸ್‌ ವಿಶೇಷ ಸ್ಥಾನ ಕಲ್ಪಿಸಿತ್ತು. ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಬಿಜೆಪಿ ಈಡೇರಿಸಿದೆ’ ಎಂದು ಸಂತಸ ಹಂಚಿಕೊಂಡರು.

ಬಿಜೆಪಿ ಮುಖಂಡ ಜಿ.ಎಂ.ಸುರೇಶ್‌ ಸೇರಿ ಅನೇಕರು ಇದ್ದರು.

‘ಜವಾಹರಲಾಲ್‌ ನೆಹರೂ ಅವರ ಎಡವಟ್ಟಿನಿಂದ ಕಾಶ್ಮೀರಕ್ಕೆ ವಿಶೇಷ ಸ್ಥಾನ ಲಭಿಸಿತ್ತು. ಇದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿತ್ತು. ವಿಶೇಷ ಸ್ಥಾನವನ್ನು ರದ್ದುಪಡಿಸುವ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಬಿಜೆಪಿ ಎತ್ತಿ ಹಿಡಿದಿದೆ’ ಎಂದು ಎಬಿವಿಪಿ ಕಾರ್ಯಕರ್ತರು ಹೇಳಿದರು.

ನಗರ ಸಂಘಟನಾ ಕಾರ್ಯದರ್ಶಿ ಕಾರ್ತಿಕ್‌ ಕೊಪ್ಪ, ಕಾರ್ಯದರ್ಶಿ ಸತೀಶ್‌ ಭಗತ್‌, ಆದರ್ಶ, ಚಂದ್ರಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.