ADVERTISEMENT

ಬರಗೂರು ಪ್ರಶಸ್ತಿ ಪ್ರದಾನ ಜ.20ಕ್ಕೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 12:09 IST
Last Updated 16 ಜನವರಿ 2019, 12:09 IST

ಚಿತ್ರದುರ್ಗ: ನಾಡೋಜ ಡಾ.ಬರಗೂರು ಪ್ರತಿಷ್ಠಾನ ನೀಡುವ ಬರಗೂರು ಹಾಗೂ ರಾಜಲಕ್ಷ್ಮಿ ಬರಗೂರು ಪ್ರಶಸ್ತಿ ಪ್ರದಾನ ಸಮಾರಂಭ ಜ.20ರಂದು ಚಿತ್ರದುರ್ಗದ ಕ್ರೀಡಾಭವನದಲ್ಲಿ ನಡೆಯಲಿದೆ.

‘ಐದು ವರ್ಷ ಬೆಂಗಳೂರು ಹಾಗೂ ಒಮ್ಮೆ ತುಮಕೂರಿನಲ್ಲಿ ನಡೆದಿದ್ದ ಈ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಬರಗೂರು ಪ್ರಶಸ್ತಿ ನೀಡಲಾಗುತ್ತದೆ. ಕಾದಂಬರಿಕಾರ ಬಿ.ಎಲ್‌.ವೇಣು, ಭಾಷಾ ತಜ್ಞ ಕೆ.ವಿ.ನಾರಾಯಣ, ಸಾಹಿತಿ ಫಕೀರ್‌ ಮುಹಮ್ಮದ್‌ ಕಟ್ಪಾಡಿ ಸೇರಿ ಹಲವರು ಈ ಪ್ರಶಸ್ತಿ ಪಡೆದಿದ್ದಾರೆ’ ಎಂದು ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬರಗೂರು ಪ್ರಶಸ್ತಿಗೆ ಸಂಗೀತ ನಿರ್ದೇಶಕ ರಾಜನ್‌ ಹಾಗೂ ಸಾಹಿತಿ ದೊಡ್ಡಹುಲ್ಲೂರು ರುಕ್ಕೋಜಿ ಅವರನ್ನು ಆಯ್ಕೆ ಮಾಡಲಾಗಿದೆ. ಸಂಸದ ಬಿ.ಎನ್‌.ಚಂದ್ರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಹಾಗೂ ನಟ ಸುಂದರರಾಜ್‌ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 10.30ರಿಂದ 11.30ರವರೆಗೆ ಸಿದ್ದರಾಮೇಶ್ವರ ಸುಗಮ ಸಂಗೀತ ಕಲಾ ಬಳಗದ ಕಲಾವಿದರು ಸಿನಿಮಾ ಗೀತೆಗಳನ್ನು ಹಾಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

ನಿವೃತ್ತ ಪ್ರಾಧ್ಯಾಪಕ ಡಾ.ಸಿ.ಶಿವಲಿಂಗಪ್ಪ ಮಾತನಾಡಿ, ‘ರಾಜಲಕ್ಷ್ಮಿ ಅವರ ಸ್ಮರಣಾರ್ಥ ನೀಡುವ ಪ್ರಶಸ್ತಿಗೆ ಡಾ.ಕೆ.ಎಸ್‌.ಕುಮಾರಸ್ವಾಮಿ, ಚೀಮನಹಳ್ಳಿ ರಮೇಶಬಾಬು ಹಾಗೂ ಶ್ರೀಧರ ಬನವಾಸಿ ಆಯ್ಕೆಯಾಗಿದ್ದಾರೆ. ಸಾಹಿತ್ಯ ವಿಭಾಗದಲ್ಲಿ ಒಬ್ಬರಿಗೆ ಮಾತ್ರ ಅವಕಾಶವಿತ್ತು. ತೀರ್ಪುಗಾರರು ಇಬ್ಬರ ಹೆಸರನ್ನು ಆಯ್ಕೆ ಮಾಡಿದ್ದರಿಂದ ಪ್ರತ್ಯೇಕವಾಗಿ ಪ್ರಶಸ್ತಿ ನೀಡಲಾಗುತ್ತದೆ. ಶಾಸಕ ಟಿ.ರಘುಮೂರ್ತಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದು ವಿವರಿಸಿದರು.

‘ಬಂಡಾಯ ಹಾಗೂ ವೈಚಾರಿಕ ಪ್ರಜ್ಞೆ ಹೊಂದಿದವರನ್ನು ಮಾತ್ರ ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಬದುಕು ಮತ್ತು ಬರಹ ಒಂದೇ ಆಗಿರುವವರಿಗೆ ಆದ್ಯತೆ ನೀಡಲಾಗಿದೆ. ಸಾಹಿತ್ಯದ ಮೂಲಕ ಮಾನವೀಯ ಮೌಲ್ಯಗಳನ್ನು ಪಸರಿಸುವ ಪ್ರಯತ್ನ ಮಾಡುತ್ತಿರುವ ಲೇಖಕರನ್ನು ಗುರುತಿಸಲಾಗಿದೆ’ ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ವೀರೇಶ್‌, ಜೆಡಿಎಸ್‌ ಮುಖಂಡ ಗೋಪಾಲಸ್ವಾಮಿ ನಾಯಕ, ಎಚ್‌.ನಟೇಶ್‌ ಮೇಟಿಕುರ್ಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.