ಚಿತ್ರದುರ್ಗ: ‘ಬಸವಣ್ಣ ಅವರ ಚಿಂತನೆ ಫಲವಾಗಿ ಮಹಿಳೆಯರು ಸಾಧನೆಯತ್ತ ಮುಖ ಮಾಡಲು ಸಾಧ್ಯವಾಗಿದೆ. ಶೋಷಿತ ವರ್ಗ ಮುಖ್ಯವಾಹಿನಿಗೆ ಬರಲು ಸಹಕಾರಿ ಆಗಿದೆ’ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಸೀಬಾರ ಸಮೀಪದ ಕಚೇರಿಯಲ್ಲಿ ಕಾಂಗ್ರೆಸ್ ಪರಿಶಿಷ್ಟ ಜಾತಿ ತಾಲ್ಲೂಕು ಘಟಕದಿಂದ ಶುಕ್ರವಾರ ಆಯೋಜಿಸಿದ್ದ ‘ಬಸವ ಜಯಂತಿ’ಯಲ್ಲಿ ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ‘ಅನುಭವ ಮಂಟಪದ ಪರಿಕಲ್ಪನೆಯಲ್ಲಿಯೇ ಅಂಬೇಡ್ಕರ್ ರಚಿಸಿದ ಸಂವಿಧಾನ ಇರುವುದು ವಿಶೇಷ’ ಎಂದರು.
‘ಅಂಧಶ್ರದ್ಧೆ, ಮೌಢ್ಯಾಚಾರಣೆ, ಅಸಮಾನತೆ ವಿರುದ್ಧ ನಿರಂತರ ಹೋರಾಟ ನಡೆಸಿ, ವೈಜ್ಞಾನಿಕ ಸಮಾಜ ನಿರ್ಮಾಣದ ಕನಸು ಕಂಡಿದ್ದ ಬಸವಣ್ಣನ ಆದರ್ಶಗಳನ್ನು ವಿವಿಧ ಮಠಾಧೀಶರು, ಧರ್ಮಾಧಿಕಾರಿಗಳು, ಪ್ರಜ್ಞಾವಂತರು, ಚಿಂತಕರು ಅನುಷ್ಠಾನಕ್ಕೆ ತರುವ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ಸರ್ವರ ಸಹಕಾರ ಅಗತ್ಯ’ ಎಂದು ಮನವಿ ಮಾಡಿದರು.
ವಿಜಯಮ್ಮ ಆಂಜನೇಯ, ಅರುಂಧತಿ ಆಂಜನೇಯ, ಕಾಂಗ್ರೆಸ್ ಪರಿಶಿಷ್ಟ ಜಾತಿ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ಕೋಟಿ, ಪ್ರದೀಪ್, ರಂಗಸ್ವಾಮಿ, ವಿರುಪಾಕ್ಷಪ್ಪ, ರೇಖಾ ಇದ್ದರು.
ಮಹದೇವ ನಿಧನಕ್ಕೆ ಸಂತಾಪ: ‘ರಾಜಕೀಯ ವಿಶ್ಲೇಷಕ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ ನಿಧನ ಪತ್ರಿಕಾರಂಗಕ್ಕೆ ಮತ್ತು ನಾಡಿಗೆ ತುಂಬಲಾರದ ನಷ್ಟವಾಗಿದೆ’ ಎಂದು ಎಚ್.ಆಂಜನೇಯ ಸಂತಾಪ ವ್ಯಕ್ತಪಡಿಸಿದ್ದಾರೆ.
‘ಮಹದೇವ ಪ್ರಕಾಶ್ ರಾಜ್ಯದ ರಾಜಕೀಯವನ್ನು ಚೆನ್ನಾಗಿ ಅಧ್ಯಯನ ಮಾಡಿದ್ದರು. ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪ ಅವರ ಕಾಲದಿಂದ ಈವರೆಗಿನ ಮುಖ್ಯಮಂತ್ರಿಗಳ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳ ಸಾಧನೆ ಹಾಗೂ ನಡೆದ ಘಟನೆಗಳ ಕುರಿತು ಅಂಕಿ-ಅಂಶಗಳ ಸಮೇತ ಬರೆಯುತ್ತಿದ್ದರು. ಪತ್ರಿಕಾ ಕ್ಷೇತ್ರದ ಭಂಡಾರವನ್ನು ಕಳೆದುಕೊಂಡಿರುವುದು ನೋವಿನ ಸಂಗತಿ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.