ADVERTISEMENT

800 ವರ್ಷಗಳ ಸಾಮಾಜಿಕ ಬೆಳವಣಿಗೆ ಗೌಣ: ಡಾ.ಪುರುಷೋತ್ತಮ ಬಿಳಿಮಲೆ

‘ಮತ್ತೆ ಕಲ್ಯಾಣ’ದಲ್ಲಿ ಡಾ.ಪುರುಷೋತ್ತಮ ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 3:57 IST
Last Updated 11 ಆಗಸ್ಟ್ 2020, 3:57 IST
ಡಾ.ಪುರುಷೋತ್ತಮ ಬಿಳಿಮಲೆ
ಡಾ.ಪುರುಷೋತ್ತಮ ಬಿಳಿಮಲೆ   

ಹೊಸದುರ್ಗ: ‘ವಚನಗಳನ್ನು ಸಂಸ್ಥೀಕರಣಗೊಳಿಸುವುದರ ಜೊತೆಗೆ ಸಮಕಾಲೀನಗೊಳಿಸುವ ಭರದಲ್ಲಿ ಈ ನಡುವಿನ 800 ವರ್ಷಗಳ ಸಾಮಾಜಿಕ ಬೆಳವಣಿಗೆಯನ್ನು ಗೌಣಗೊಳಿಸುತ್ತಿದ್ದೇವೆ’ ಎಂದು ಜನಪದ ತಜ್ಞ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.

‘ಮತ್ತೆ ಕಲ್ಯಾಣ’ ಕಾರ್ಯಕ್ರಮದ 10ನೇ ದಿನವಾದ ಸೋಮವಾರ ‘ವಚನಗಳ ಹೊಸ ಅಧ್ಯಯನ ವಿಧಾನಗಳು’ ಕುರಿತು ಉಪನ್ಯಾಸ ನೀಡಿದರು.

‘ವಚನ ಚಳವಳಿ ಮತ್ತು ವಚನ ಸಾಹಿತ್ಯದ ಬಗ್ಗೆ ನಡೆದ ಇದುವರೆಗಿನ ಅಧ್ಯಯನಗಳನ್ನು ಪರಿಶೀಲಿಸಿದರೆ ಈಗ ಹೊಸ ಮಾತುಗಳನ್ನು ಹೇಳುವ ವಿಶ್ವಾಸ, ಧೈರ್ಯ ಇಲ್ಲ. ಹಳಕಟ್ಟಿಯವರು ವಚನ ಸಂಕಲನದ ಕೆಲಸ ನಡೆಸಿದ ಮೇಲೆ ಎ.ಕೆ. ರಾಮಾನುಜಂ ಅದರ ಬಗ್ಗೆ ಬರೆದಂತಹ ಕ್ರಮವಾಗಲಿ, ಇತ್ತೀಚೆಗೆ ಎಚ್.ಎಸ್. ಶಿವಪ್ರಕಾಶ್ ಅವರು ಮಾಡಿರುವ ವ್ಯಾಖ್ಯಾನಗಳನ್ನು ಪರಿಶೀಲಿಸಿದರೆ ನಮಗೆ ಈಗ ಅದಕ್ಕಿಂತ ಮುಂದೆ ಹೋಗುವುದು ಕಷ್ಟ’ ಎಂದು ವಿವರಿಸಿದರು.

ADVERTISEMENT

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಲಿಂಗಾಯತ ಧರ್ಮದ ವಿಚಾರ ಬಂದಾಗ ಬಹುತೇಕರು ಗಮನಿಸುವುದು ಚೆನ್ನಬಸವಣ್ಣನವರ ವಚನಗಳನ್ನು. ಅವರು ಈ ಧರ್ಮದ ಸೂತ್ರಗಳಾದ ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಗಳ ಬಗ್ಗೆ ಮಾತನಾಡಬಲ್ಲವರಾಗಿದ್ದರು. ಇವತ್ತು ವಿಚಾರವಂತರೆನ್ನುವವರು ಬಹುತೇಕ ಶರಣರ ತತ್ವಗಳನ್ನು ಒಪ್ಪುವರು. ಬುದ್ಧನ ನಂತರ ಸಮಾಜಮುಖಿ ಚಿಂತನೆ ಮಾಡಿದವರು ಬಸವಣ್ಣ ಎಂದು ಬಾಯ್ತುಂಬ ಹೊಗಳುವರು. ಆದರೆ, ಅವರು ಹೇಳುವ ಎಲ್ಲ ವಿಚಾರಗಳನ್ನೂ ಪರಿಪಾಲಿಸುವಲ್ಲಿ ಸೋಲುವರು’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.