ಮೊಳಕಾಲ್ಮುರು: ಹಲವು ನೂತನ ಯೋಜನೆಗಳ ಮೂಲಕ ಗ್ರಾಮ ಪಂಚಾಯಿತಿಗಳ ಸದೃಢತೆಗೆ ಬಿಜೆಪಿ ಹೆಚ್ಚಿನ ಒತ್ತು ನೀಡಿದೆ ಎಂದು ವಿಧಾನಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿ ಕೆ.ಎಸ್. ನವೀನ್ ಹೇಳಿದರು.
ತಾಲ್ಲೂಕಿನ ರಾಂಪುರದಲ್ಲಿ ಬುಧವಾರ ಪಕ್ಷ ಹಮ್ಮಿಕೊಂಡಿದ್ದ ವಿಧಾನಪರಿಷತ್ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಲಜೀವನ್ ಮಿಷನ್ ಮೂಲಕ ಕೋಟ್ಯಂತರ ಮನೆಗಳಿಗೆ ನೀರಿನ ವ್ಯವಸ್ಥೆ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. 3 ಕೋಟಿ ಮನೆಗಳಿಗೆಕುಡಿಯುವ ನೀರಿನ ಸಂಪರ್ಕನೀಡಲಾಗಿದ್ದು, ಒಟ್ಟು 10 ಕೋಟಿ ಮನೆಗಳಿಗೆ ಸಂಪರ್ಕ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ನೀಡಿ ಯೋಜನೆಗಳ ಅನುಷ್ಠಾನಕ್ಕೆ ಮಧ್ಯವರ್ತಿ ವ್ಯವಸ್ಥೆ ರದ್ದುಪಡಿಸಿ ಗ್ರಾಮ
ಪಂಚಾಯಿತಿಗಳಿಗೆ ಯೋಜನೆ ಅನುಷ್ಠಾನ ಹೊಣೆ ನೀಡಲಾಗಿದೆ ಎಂದರು.
ಕೋವಿಡ್ ಸಮಯದಲ್ಲಿ ಕಡಿತ ಮಾಡಲಾಗಿದ್ದ ಕಾಮಗಾರಿಗಳನ್ನು ಈ ವರ್ಷ ಹೆಚ್ಚುವರಿ ಸೇರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚು ಆದ್ಯತೆ ನೀಡಿದ್ದು, ಕಾಲ, ಕಾಲಕ್ಕೆ ಕೂಲಿ, ಸಾಮಗ್ರಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಂಚಾಯಿತಿ ಅನುದಾನಕ್ಕೆಮನವಿ ಮಾಡಿದ ತಕ್ಷಣ ಅನುದಾನ ಬಿಡುಗಡೆ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎ. ಮುರಳಿ, ‘ಅವಳಿ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಾಗಿ ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದು,ಪಕ್ಷದ ಗೆಲುವು ಖಚಿತ. ಮೊಳಕಾಲ್ಮುರಿನಿಂದ ಇಂದು ಪ್ರಚಾರ ಆರಂಭಿಸಲಾಗಿದೆ’ ಎಂದು ಹೇಳಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಚ್.ಟಿ. ನಾಗೀರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಎ. ರಾಮದಾಸ್ ಮಾತನಾಡಿದರು.
ಬಿಜೆಪಿ ಮಂಡಲದ ಅಧ್ಯಕ್ಷ ಡಾ.ಪಿ.ಎಂ. ಮಂಜುನಾಥ್, ಮುಖಂಡರಾದ ಜಿಂಕಲು ಬಸವರಾಜ್, ಆರ್.ಜಿ. ಗಂಗಾಧರಪ್ಪ, ಪಾಪೇಶ್ ನಾಯಕ್, ಪಟ್ಟಣ ಪಂಚಾಯಿತಿಅಧ್ಯಕ್ಷ ಪಿ. ಲಕ್ಷ್ಮಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.