ಚಿಕ್ಕಜಾಜೂರು: ಎರಡು ದಿನಗಳಿಂದ ಬಿಡುವು ನೀಡಿದ್ದ ಮಳೆ ಮಂಗಳವಾರ ಸಂಜೆ ಮತ್ತೆ ಆರಂಭವಾಗಿದ್ದು, ರಾಗಿ ಬಿತ್ತನೆ ಸೇರಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಆದಂತೆ ಕಾಡಿಸುತ್ತಿದೆ.
ಮಂಗಳವಾರ ಸಂಜೆ ಹೋಬಳಿಯ ಬಿ. ದುರ್ಗ, ಸಾಸಲು, ಮುತ್ತುಗದೂರು ಮೊದಲಾದ ಕಡೆಗಳಲ್ಲಿ ಅಂದಾಜು ಅರ್ಧ ಗಂಟೆಗೂ ಹೆಚ್ಚು ಕಾಲ ಬಿರುಸಿನ ಸುರಿಯಿತು. ನಂತರ, ಸಂಜೆ 7 ಗಂಟೆಯಲ್ಲೂ ಸಣ್ಣ ಪ್ರಮಾಣದಲ್ಲಿ ಮಳೆ ಆಗುತ್ತಿತ್ತು. ಸಂಜೆ ಸುರಿದ ಮಳೆಯಿಂದಾಗಿ ಜಮೀನು ಹಾಗೂ ತೋಟಗಳಲ್ಲಿ ಅಲ್ಲಲ್ಲಿ ನೀರು ನಿಂತಿದೆ.
ರಾಗಿ ಬಿತ್ತನೆಗೆ ಹಿನ್ನೆಡೆ: ಹೋಬಳಿಯ ಹಲವೆಡೆ ಮುಂಗಾರಿನ ಮಳೆ ಕೊರತೆಯಿಂದಾಗಿ ಮೆಕ್ಕೆಜೋಳ ಬಿತ್ತನೆಗೆ ಹಿನ್ನಡೆಯಾಗಿತ್ತು. ನಂತರದಲ್ಲಿ ವಾರಗಟ್ಟಲೆ ಮಳೆಯಾಗಿದ್ದರಿಂದ ಜಮೀನುಗಳಲ್ಲಿ ರಾಗಿ ಬಿತ್ತನೆ ಮಾಡಲು ರೈತರು ಹೊಲಗಳಲ್ಲಿ ಬೆಳೆದು ನಿಂತಿದ್ದ ಹುಲ್ಲು ಮತ್ತಿತರ ಗಿಡ ಗಂಟೆಗಳನ್ನು ಸ್ವಚ್ಛ ಮಾಡಿ ಹಸನು ಮಾಡಿಕೊಳ್ಳುತ್ತಿದ್ದರು. ಆದರೆ, ಮಳೆ ಬಿಡುವು ನೀಡದೆ ಇದ್ದುದರಿಂದ ರಾಗಿ ಬಿತ್ತನೆ ಮಾಡಲಾಗದೆ ಮಳೆಯ ಬಿಡುವಿಗಾಗಿ ಕಾಯುವಂತಾಗಿದೆ ಎಂದು ರೈತರಾದ ನಾಗೇಶ್, ಚಂದ್ರಪ್ಪ, ಹನುಮಂತಪ್ಪ, ಜಯಣ್ಣ, ಗಿರೀಶ್ ತಳಿಸಿದ್ದಾರೆ.
ಅಡಿಕೆ ಬೆಳೆಗಾರರಿಗೂ ತಟ್ಟದ ಬಿಸಿ: ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಮೊದಲ ಬಾರಿಯ ಅಡಿಕೆ ಇಳಿಸುವ ಕಾರ್ಯ ನಡೆಯುತ್ತಿದ್ದು, 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತೋಟಗಳು ಹಸಿಯಾಗಿವೆ. ಅಡಿಕೆಯನ್ನು ಮರಗಳಿಂದ ಇಳಿಸಿದ ನಂತರ, ಟ್ರ್ಯಾಕ್ಟರ್ಗಳಲ್ಲಿ ತುಂಬಿಕೊಂಡು ಬರುತ್ತಿದ್ದೆವು. ಆದರೆ, ಈಗ ಟ್ರ್ಯಾಕ್ಟರ್ಗಳು ತೋಟದೊಳಗೆ ಹೋಗದ ಸ್ಥಿತಿ ಇದೆ. ಇದಕ್ಕಾಗಿ ಕೆಡವಿದ ಅಡಿಕೆಯನ್ನು ಟ್ರ್ಯಾಕ್ಟರ್ವರೆಗೆ ಸಾಗಿಸಲು ಹೆಚ್ಚು ಕೂಲಿ ಕಾರ್ಮಿಕರನ್ನು ಕರೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ರೈತರಾದ ಈಶ್ವರಪ್ಪ, ನಾಗರಾಜ್, ರಾಜಪ್ಪ, ಮಂಜಣ್ಣ, ಮಲ್ಲಿಕಾರ್ಜುನ, ಕುಬೇರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.