ADVERTISEMENT

ಚಿತ್ರದುರ್ಗ |ಪ್ರತಿ ಮನೆ, ಬೀದಿ, ಹಳ್ಳಿಯಲ್ಲಿ ಸೈನಿಕರು ಹುಟ್ಟಲಿ

ಸಿಂಧೂರ ಕಾರ್ಯಾಚರಣೆ ಯಶಸ್ವಿ ಅಂಗವಾಗಿ ತಿರಂಗಯಾತ್ರೆ; ಮಾಜಿ ಯೋಧ ಸೂರಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಮೇ 2025, 16:03 IST
Last Updated 17 ಮೇ 2025, 16:03 IST
ಆಪರೇಷನ್‌ ಸಿಂಧೂರ ಯಶಸ್ವಿಯಾದ ಕಾರಣ ನಾಗರಿಕರ ವೇದಿಕೆ ವತಿಯಿಂದ ಶನಿವಾರ ನಡೆದ ತಿರಂಗ ಯಾತ್ರೆಯಲ್ಲಿ ಸಾವಿರಾರು ಜನರು 1 ಕಿ.ಮೀ ಉದ್ದದ ತಿರಂಗದ ಜೊತೆ ಮೆರವಣಿಗೆಯಲ್ಲಿ ಸಾಗಿದರು
ಆಪರೇಷನ್‌ ಸಿಂಧೂರ ಯಶಸ್ವಿಯಾದ ಕಾರಣ ನಾಗರಿಕರ ವೇದಿಕೆ ವತಿಯಿಂದ ಶನಿವಾರ ನಡೆದ ತಿರಂಗ ಯಾತ್ರೆಯಲ್ಲಿ ಸಾವಿರಾರು ಜನರು 1 ಕಿ.ಮೀ ಉದ್ದದ ತಿರಂಗದ ಜೊತೆ ಮೆರವಣಿಗೆಯಲ್ಲಿ ಸಾಗಿದರು   

ಚಿತ್ರದುರ್ಗ: ‘ಸಿಂಧೂರ ಕಾರ್ಯಾಚರಣೆಯ ಮೂಲಕ ಭಾರತದ ಶೌರ್ಯ ಜಗತ್ತಿಗೆ ಗೊತ್ತಾಗಿದೆ. ಪ್ರತಿ ಮನೆ, ಗಲ್ಲಿ, ಬೀದಿ, ಹಳ್ಳಿಗಳಲ್ಲಿ ಸೈನಿಕರು ಹುಟ್ಟಿದರೆ ನಮ್ಮ ದೇಶದ ಶಕ್ತಿ ಮತ್ತಷ್ಟು ಹೆಚ್ಚಾಗಲಿದೆ’ ಎಂದು ಮಾಜಿ ಯೋಧ ಹವಾಲ್ದಾರ್‌ ಸೂರಯ್ಯ ಹೇಳಿದರು.

ಪಾಕಿಸ್ತಾನ ವಿರುದ್ಧ ಭಾರತದ ಯೋಧರು ನಡೆಸಿದ ಆಪರೇಷನ್‌ ಸಿಂಧೂರ ಯಶಸ್ವಿಯಾದ ಅಂಗವಾಗಿ ಇಲ್ಲಿನ ‘ನಾಗರಿಕರ ವೇದಿಕೆ’ ವತಿಯಿಂದ ಶನಿವಾರ ನಡೆದ ತಿರಂಗಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ದೇಶದ ಸೈನಿಕರ ಶಕ್ತಿಯನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಿದೆ. 1967ರಲ್ಲಿ  ನಡೆದ ಯುದ್ಧದಲ್ಲಿ ನಮ್ಮ ಸೈನಿಕರು ಗೆಲುವು ಸಾಧಿಸಿದ್ದಾರೆ. 1971ರಲ್ಲಿ ನಡೆದ ಯುದ್ಧದಲ್ಲೂ ನಮ್ಮ ದೇಶ ವಿಜಯ ಪತಾಕೆಯನ್ನು ಹಾರಿಸಿದೆ. 1999ರಲ್ಲಿ ನಡೆದ ಕಾರ್ಗಿಲ್‌ ಯುದ್ಧದಲ್ಲಿ ನಾನು ಕೂಡ ಭಾಗವಹಿಸಿದ್ದ ಹೆಮ್ಮೆ ನನ್ನದು. ಆ ಯುದ್ಧದಲ್ಲೂ ನಾವು ಜಯಗಳಿಸುವ ಮೂಲಕ ನಮ್ಮ ಯೋಧರ ಶಕ್ತಿಯನ್ನು ಅನಾವರಣಗೊಳಿಸಿದ್ದೇವೆ’ ಎಂದರು.

ADVERTISEMENT

‘2021ರಲ್ಲಿ ಪುಲ್ವಾಮ ದಾಳಿ ನಡೆದಾಗಲೂ ನಮ್ಮ ಸೈನಿಕರು ಪಾಕಿಸ್ತಾನದ ನೆಲೆಗಳಿಗೆ ನುಗ್ಗಿ ಶತ್ರುಗಳಿಗೆ ತಕ್ಕ ಪಾಠ ಕಲಿಸಿದ್ದರು. ಪೆಹಲ್ಗಾಮ್‌ನಲ್ಲಿ ನಡೆದ ಘಟನೆಯಿಂದ ಇಡೀ ದೇಶಕ್ಕೆ ನೋವಾಗಿತ್ತು. ಇಂತಹ ಸಂದರ್ಭದಲ್ಲಿ ಆಧುನಿಕ ಯುದ್ಧ ತಂತ್ರಗಳನ್ನು ಬಳಸಿ ಸಿಂಧೂರ ಕಾರ್ಯಾಚರಣೆ ಮೂಲಕ ಭಯೋತ್ಪಾದಕರ ನೆಲೆಗಳನ್ನು ನಾಶ ಮಾಡಲಾಗಿದೆ. ಈ ಕಾರ್ಯಾಚರಣೆಯಿಂದ ನಮ್ಮ ಸೈನಿಕರಿಗೆ ಇರುವ ಶಕ್ತಿಯ ಅರಿವು ಜಗತ್ತಿಗೆ ಗೊತ್ತಾಗಿದೆ’ ಎಂದರು.

ಆರ್‌ಎಸ್‌ಎಸ್‌ ಪ್ರಾಂತ ಪ್ರಮುಖ ಯಾದವ ಕೃಷ್ಣ ಮಾತನಾಡಿ ‘ಹಿಂದೆ ಭಾರತದಲ್ಲಿ ನಡೆದ ಯಾವುದೇ ಯುದ್ಧ, ಕಾರ್ಯಾಚರಣೆ ಕೂಡ ಆಪರೇಷನ್‌ ಸಿಂಧೂರಕ್ಕೆ ಸಮವಲ್ಲ. ಕೇವಲ 4 ದಿನಗಳಲ್ಲಿ ನಿಶ್ಚಿತ ಗುರಿಯೊಂದಿಗೆ ನಮ್ಮ ಸೈನಿಕರು ಭಯೋತ್ಪಾದಕರ ನೆಲೆಗಳನ್ನು ನಾಶ ಮಾಡಿದ್ದಾರೆ. ನಾವು ನಾಗರಿಕರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ಮಾಡಿಲ್ಲ. ಹೀಗಾಗಿ ನಮ್ಮ ಸೈನಿಕರ ಯುದ್ಧ ನೀತಿ ಪ್ರಪಂಚಕ್ಕೆ ಮಾದರಿಯಾಗಿದೆ’ ಎಂದರು.

‘ಜಮ್ಮು–ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ನಂತರ ಕಾಶ್ಮೀರ ಸಮಸ್ಯೆಗೆ ಒಂದು ತಾರ್ಕಿಕವಾದ ಅಂತ್ಯ ಬಂದಂತಾಗಿದೆ. ಪಾಕಿಸ್ತಾನ ಆಕ್ರಮಿಸಿಕೊಂಡಿರುವ ನೆಲೆಗಳು ನಮ್ಮ ಕೈಗೆ ಸಿಗುವ ದಿನ ದೂರವಲ್ಲ. ಆಪರೇಷನ್‌ ಸಿಂಧೂರ ಇನ್ನೂ ನಿಂತಿಲ್ಲ. ಪಾಕಿಸ್ತಾನದ ಮನವಿ ಮೇರೆಗೆ ದಾಳಿ ನಡೆಸುವುದನ್ನು ಮಾತ್ರ ನಿಲ್ಲಿಸಿದ್ದೇವೆ. ಸಿಂಧೂರ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದರು.

‘ಭಾರತೀಯ ಸೈನ್ಯ ಇಡೀ ವಿಶ್ವದಲ್ಲಿ ಶಕ್ತಿಶಾಲಿಯಾಗಿದೆ ಎಂಬುದನ್ನು ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಮೂಲಕ ತೋರಿಸಲಾಗಿದೆ. 2016ರಲ್ಲಿ ನಾವು ಎಲ್‌ಒಸಿಯನ್ನು ದಾಟಿ ಹೋಗಿ ದಾಳಿ ಮಾಡಿದ್ದೆವು. 2019ರಲ್ಲಿ ಅಂತರಾಷ್ಟ್ರೀಯ ಗಡಿ ರೇಖೆ ದಾಟಿ ಪಾಕಿಸ್ತಾನದ ಒಳಗೆ ನುಗ್ಗಿದ್ದೆವು. ಆದರೆ ಈಗ ಪಾಕಿಸ್ತಾನದ ಹೃದಯ ಭಾಗಕ್ಕೆ ನುಗ್ಗಿ ದಾಳಿ ಮಾಡಿದ್ದೇವೆ. ನಮ್ಮ ಸೈನಿಕರ ವೃತ್ತಿಪರತೆಯನ್ನು ಕಂಡು ಇಡೀ ವಿಶ್ವವೇ ಕಕ್ಕಾಬಿಕ್ಕಿಯಾಗಿದೆ’ ಎಂದರು.

‘ತಾಯಿಯ ಋಣ, ಸೈನಿಕರ ಋಣ ಬಲುದೊಡ್ಡದಾಗಿದೆ. ಸೈನಿಕರ ಋಣ ತೀರಿಸಬೇಕಾದರೆ ನಾವು ಪ್ರತಿಯೊಬ್ಬರು ಶಾಶ್ವತವಾಗಿ ಜಾಗೃತಗೊಳ್ಳಬೇಕಾಗಿದೆ’ ಎಂದು ಹೇಳಿದರು.

ಇನ್ನರ್‌ವ್ಹೀಲ್‌ ಸಂಸ್ಥೆಯ ಜ್ಯೋತಿ ಲಕ್ಷ್ಮಣ್‌ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌, ಶಾಸಕ ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ಆರ್‌ಎಸ್‌ಎಸ್‌ ಜಿಲ್ಲಾ ಕಾರ್ಯನಿರ್ವಾಹ ರಾಮ್‌ ಕಿರಣ್‌ ಇದ್ದರು.

ತಿರಂಗ ಯಾತ್ರೆಯಲ್ಲಿ ಎಂ.ಚಂದ್ರಪ್ಪ ಜಿ.ಎಚ್‌.ತಿಪ್ಪಾರೆಡ್ಡಿ ಗೋವಿಂದ ಕಾರಜೋಳ ಕೆ.ಎಸ್‌.ನವೀನ್‌ ಭಾಗವಹಿಸಿದ್ದರು
ಜನರು ರಾಷ್ಟ್ರಧ್ವಜ ಹಿಡಿದು ಸಾಗಿದರು
ಸೇವಾಲಾಲ್‌ ಸ್ವಾಮೀಜಿ

ತಿರಂಗ ಜೊತೆಗೆ ಸಾವಿರಾರು ಜನ ಹೊಳಲ್ಕೆರೆ ರಸ್ತೆಯ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ವೃತ್ತದಿಂದ ತಿರಂಗಯಾತ್ರೆ ಆರಂಭವಾಯಿತು. ಸಂತೇಪೇಟೆ ಬಿ.ಡಿ.ರಸ್ತೆ ಎಸ್‌ಬಿಎಂ ವೃತ್ತ ಮಹಾವೀರ ವೃತ್ತ ತಾಲ್ಲೂಕು ಕಚೇರಿ ಮುಂಭಾಗದಿಂದ ಒನಕೆ ಓಬವ್ವ ವೃತ್ತಕ್ಕೆ ಮೆರವಣಿಗೆ ತಲುಪಿತು. ಮೆರವಣಿಗೆಯುದ್ದಕ್ಕೂ ಸಾವಿರಾರು ಜನರು ತಿರಂಗದ ಜೊತೆ ಸಾಗಿ ಬಂದರು. ಮೊಳಕಾಲ್ಮುರಿನ ಹರೀಶ್‌ ಹಾಗೂ ತಂಡದ ಸದಸ್ಯರು 1 ಕಿ.ಮೀ ಉದ್ದ 8 ಅಗಲದ ತಿರಂಗವನ್ನು ಸಿದ್ಧಪಡಿಸಿಕೊಂಡು ಬಂದಿದ್ದರು. ಕಲಾವಿದ ನಾಗರಾಜ ಬೇದ್ರೆ ಹಾಗೂ ತಂಡದ ಸದಸ್ಯರು ಶಾಲಾ ಕಾಲೇಜು ವಿದ್ಯಾರ್ಥಿಗಳ ಮುಖಕ್ಕೆ ತ್ರಿವರ್ಣ ಧ್ವಜದ ಬಣ್ಣ ಹಚ್ಚಿ ದೇಶ ಪ್ರೇಮ ಮೆರೆದರು. ವಿವಿಧ ಸಂಘಟನೆಗಳ ಸದಸ್ಯರು ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರಿಗೂ ಮಜ್ಜಿಗೆ ಪಾನಕ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.

ಬಂದೂಕು ಹಿಡಿದು ಯುದ್ಧಕ್ಕೆ ನಿಲ್ಲುವೆ: ಸೇವಾಲಾಲ್‌ ಸ್ವಾಮೀಜಿ ‘ಸ್ವಾಮೀಜಿ ಎಂದರೆ ಕೇವಲ ಪೂಜೆ ಪುನಸ್ಕಾರ ಮಾಡಿಕೊಂಡೇ ಇರಬೇಕು ಎಂದೇನಿಲ್ಲ. ನನಗೆ ಅವಕಾಶ ನೀಡಿದರೆ ದೇಶದ ಗಡಿಯಲ್ಲಿ ಬಂದೂಕು ಹಿಡಿದು ಯುದ್ಧಕ್ಕೆ ನಿಲ್ಲುತ್ತೇನೆ’ ಎಂದು ಬಂಜಾರ ಗುರುಪೀಠದ ಪೀಠಾಧ್ಯಕ್ಷ ಸೇವಾಲಾಲ್‌ ಸ್ವಾಮೀಜಿ ಹೇಳಿದರು. ತಿರಂಗಯಾತ್ರೆಯಲ್ಲಿ ಮಾತನಾಡಿದ ಅವರು ‘ಬುದ್ಧ ಬಸವಣ್ಣ ಹುಟ್ಟಿದ ನಮ್ಮ ನಾಡು ಸದಾ ಶಾಂತಿ ಬಯಸುತ್ತದೆ. ಆದರೆ ನಮ್ಮನ್ನು ಯಾರಾದರೂ ಕೆಣಕಿದರೆ ಅವರಿಗೆ ತಕ್ಕ ಶಿಕ್ಕೆ ವಿಧಿಸುತ್ತೇವೆ. ಅವರನ್ನು ಸರ್ವನಾಶ ಮಾಡುವ ಶಕ್ತಿ ಭಾರತಕ್ಕಿದೆ. ಗಡಿಯಲ್ಲಿ ಸೈನಿಕರ ಕಷ್ಟ ನೋಡಿದರೆ ನಾವೂ ಬಂದೂಕು ಹಿಡಿದು ಯುದ್ಧಕ್ಕೆ ನಿಲ್ಲಬೇಕು ಎಂಬ ಭಾವನೆ ಮೂಡುತ್ತದೆ’ ಎಂದರು. ‘ಪೆಹಲ್ಗಾಮ್‌ ಭಯೋತ್ಪಾದಕ ದಾಳಿಯ ನಂತರ ನಮ್ಮ ದೇಶದ ಪ್ರತಿಯೊಬ್ಬರ ರಕ್ತ ಕೊತಕೊತ ಕುದಿಯುತ್ತಿತ್ತು. ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಮೂಲಕ ನಮ್ಮ ಸೈನಿಕರು ಶತ್ರು ದೇಶಕ್ಕೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಭಾರತ ಎಂದರೆ ಅಧ್ಯಾತ್ಮದ ತಾಯಿ ಬೇರು. ಶರಣರು ಸತ್ಪುರುಷರು ವೀರರು ನೆಲೆಸಿದ ನಮ್ಮ ನಾಡಿನ ಶಕ್ತಿ ಇಡೀ ವಿಶ್ವಕ್ಕೆ ಗೊತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.