ADVERTISEMENT

ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿದ್ದ ರೈತ ಅಪಘಾತದಲ್ಲಿ ಮೃತ

ರಸ್ತೆಯಲ್ಲಿ ರಾಗಿಹುಲ್ಲು ಒಕ್ಕಣೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 15:48 IST
Last Updated 31 ಜನವರಿ 2021, 15:48 IST

ಚಿತ್ರದುರ್ಗ: ತಾಲ್ಲೂಕಿನ ಬೇಡರಶಿವನಕೆರೆ ಮತ್ತು ಹರಳಕಟ್ಟೆ ಗ್ರಾಮಗಳ ನಡುವಿನ ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿದ್ದ ರೈತ ಅಪಘಾತದಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಮೃತ ರೈತನನ್ನು ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ತಿಮ್ಮಲಪುರ ಗ್ರಾಮದ ಬಿ.ನಾಗರಾಜಪ್ಪ (56) ಎಂದು ಗುರುತಿಸಲಾಗಿದೆ. ಸುರೇಶಪ್ಪ, ಅಭಿಷೇಕ್, ದುಗ್ಗಪ್ಪ ಮತ್ತು ನವೀನ ಎಂಬುವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೇಡರಶಿವನಕೆರೆ ಮತ್ತು ಹರಳಕಟ್ಟೆ ಗ್ರಾಮಗಳ ಸೇತುವೆ ಸಮೀಪ ರೈತರು ರಾಗಿಹುಲ್ಲನ್ನು ಒಕ್ಕಣೆಗೆ ಹಾಕಿದ್ದರು. ಶನಿವಾರ ಮಧ್ಯಾಹ್ನ ರಸ್ತೆ ಪಕ್ಕದಲ್ಲೇ ಕುಳಿತು ಊಟ ಮಾಡುತಿದ್ದಾಗ ಅಪಘಾತ ಉಂಟಾಗಿದೆ. ಹರಳಕಟ್ಟೆ ಗ್ರಾಮದ ಕಡೆಯಿಂದ ವೇಗವಾಗಿ ಬಂದ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದಿದೆ ಎಂದು ಭರಮಸಾಗರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಡಿಕ್ಕಿಯ ರಭಸಕ್ಕೆ ನಾಗರಾಜಪ್ಪ ಅವರ ತಲೆ, ಕಣ್ಣು ಹಾಗೂ ಮೂಗಿಗೆ ಬಲವಾದ ಪೆಟ್ಟು ಬಿದ್ದಿತ್ತು. ತೀವ್ರ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.